top of page

ಶಾಂತಿ ಸ್ಪೋಟ- ದೇಶಭಕ್ತಿ ಥ್ರಿಲ್ಲರ್ ಕಥೆ



ಧೃತಿ ಹೆಗ್ಡೆ ಮನೆಯಿಂದ ಹೊರಡುವ ಕೊನೆಯ ಗಳಿಗೆಯವರೆಗೂ ಟಿ. ವಿ.ಯ `ಸಿರಿಗನ್ನಡ ’ ವಾಹಿನಿಯಲ್ಲಿ ಬರುತ್ತಿದ್ದ ನಗರದ ಅತಿ ಮುಖ್ಯ ಕಾರ್ಯಕ್ರಮವಾದ ಆ ಸಮ್ಮೇಳನದ ಬಗೆಗಿನ ಪ್ರಾರಂಭಿಕ ವರದಿಗಳನ್ನೇ ಗಮನವಿಟ್ಟು ನೋಡುತ್ತಿದ್ದಳು. ನೋಡಲೇ ಬೇಕಲ್ಲಾ..? ಅವಳೇ ಆ ಚಾನೆಲ್ಲಿನ ಮುಖ್ಯ ವರದಿಗಾರ್ತಿ...ಈಗ ಅಂದಿನ ಪ್ರಗತಿಪರ ಮುಸ್ಲಿಮ್ ಷಿಯಾ ನಾಯಕರು ಆಯೋಜಿಸಿದ್ದ “ಶಾಂತಿಗಾಗಿ ಕರೆ” ಎಂಬ ಅಭೂತಪೂರ್ವ ಸಮ್ಮೇಳನಕ್ಕೆ ಧೃತಿ ಅತಿ ಸಡಗರದಿಂದ ಸಿದ್ಧಳಾಗುತ್ತಿದ್ದಳು, ಇನ್ನೇನು ತಾನು ಅಲ್ಲಿಗೆ ಹೋಗಿ ಖುದ್ದಾಗಿ ಲೈವ್ ವರದಿಗಳನ್ನು ಪ್ರಸಾರ ಮಾಡಲು...

ಹೊರಡುವಾಗ ಕಾರಿನ ಕೀ ತೆಗೆದುಕೊಳ್ಳುವಾಗ ಟೇಬಲಿನಲ್ಲಿದ್ದ ತನ್ನ ಮತ್ತು ಭರತ್‍ನ ಸೆಲ್ಫೀ ಚಿತ್ರವನ್ನು ನೋಡಿದಾಗ ಮುಖದ ಮೇಲೆ ಮಂದಹಾಸವೊಂದು ಮಿಂಚಿ ಹೋಯಿತು... ಅಸಿಸ್ಟೆಂಟ್ ಕಮಾಂಡೆಂಟ್ ಭರತ್ ಹೆಗ್ಡೆ, ಕೇಂದಿಯ ಮೀಸಲು ದಳದ ಅಧಿಕಾರಿ!... ತನ್ನ ಸ್ವಾಭಿಮಾನಿ ದೇಶಭಕ್ತ ಪತಿ. ಸಿ. ಆರ. ಪಿ.ಎಫ್ ಸರ್ವೀಸಿನಲ್ಲೇ ಜೀವನದ ಸಾರ್ಥಕತೆಯನ್ನು ಕಂಡವನಂತೆ ವರ್ತಿಸುವ ತನ್ನ ಗಂಡ... ’ಎಲ್ಲಾ ಬರತ್ತೆ, ಚೆನ್ನಾಗಿ ಸೆಲ್ಫಿ ತೆಗೆಯಲು ಮಾತ್ರ ಬರಲ್ಲ’ ಎಂದು ಆ ಸೆಲ್ಫೀ ಚಿತ್ರವನ್ನು ನೋಡಿ ತಾನು ಕೀಟಲೆ ಮಾಡಿದಾಗ,... ‘ನಾನು ನಿನ್ನಂತೆ ಟಿ ವಿ ಮಾಧ್ಯಮದವನಲ್ಲ, ಕ್ಯಾಮೆರಾ ಕಣ್ಣನ್ನು ಕಂಡವನಲ್ಲ..ಬಂದೂಕಿನ ನಳಿಕೆಯನ್ನು ಮಾತ್ರ ಧೈರ್ಯದಿಂದ ದಿಟ್ಟಿಸಿದವನು,..ಹಹ್! ’ ಎಂದು ಚೇಡಿಸಿ ಆ ಚಿತ್ರವನ್ನೆ ಫ್ರೇಮ್ ಹಾಕಿಸಿ ಇಟ್ಟವನಲ್ಲವೆ?...

ಇಂದಂತೂ ದಿನಕ್ಕಿಂತಾ ಮುಂಚೆ ಅದೇ ಸಮ್ಮೇಳನದ ಸಂಪೂರ್ಣ ಸುರಕ್ಷತಾ ವ್ಯವಸ್ಥೆಯ ಮುಖ್ಯಸ್ತನಾದ್ದರಿಂದ ಬ್ರೇಕ್ ಫಾಸ್ಟಿಗೆ ಎರಡು ಸ್ಯಾಂಡ್‌ವಿಚ್‍ಗಳಲ್ಲಿ ಒಂದು ತಿಂದು, ಒಂದು ಬಿಟ್ಟು ಅರ್ಧ ಗ್ಲಾಸ್ ಕಾಫಿ ಕುಡಿಯದೇ, ತನಗೆ ಒಂದು ಫ್ಲಯಿಂಗ್ ಕಿಸ್ ಮಾತ್ರ ಕೊಟ್ಟು ತನ್ನ ಹಸಿರು ಆರ್ಮಿ ಜೀಪ್ ಏರಿ ಓಡಿಹೋದವನಲ್ಲವೆ?...ಯಾವಾಗಲೂ ಸೆಕ್ಯುರಿಟಿ ಫಸ್ಟ್, ಕಮ್ಫರ್ಟ್ ನೆಕ್ಸ್ಟ್ ಎಂದು ತನಗೇ ತತ್ವ ಹೇಳುತ್ತಾನೆ!..ವಯಸ್ಸು ಮುವತ್ತು ಮೂರಾದರೂ ಅದಕ್ಕೆ ಮೀರಿದ ಪ್ರೌಢತೆ...

ಅಬ್ಬಬ್ಬಾ..ಏನು ಇವನು ಇವತ್ತು ಮುಖ್ಯಸ್ತನಾದುದಕ್ಕೇ ಇಷ್ಟು ಓವರ್-ರಿಯಾಕ್ಷನ್..? ಏನಾಗಿ ಬಿಟ್ಟೀತು? . ..ನೋ, ತಾನು ಇದನ್ನು ತನ್ನ ಇಂದಿನ ಟಿ ವಿ ವರದಿಯಲ್ಲಿ ಚೆನ್ನಾಗಿ ಖಂಡಿಸಬೇಕು...ಹೇಗೂ ತನ್ನ ಚಾನೆಲ್ ಮೊದಲಿನಿಂದಲೂ ಈ ಸರ್ಕಾರದ ಕಾರ್ಯಕ್ರಮಗಳಿಗೂ, ಮೂಲ ಸಿದ್ಧಾಂತಗಳಿಗೂ ವಿರೋಧಿ ಬಣದ ಉದ್ಯಮಿಗಳಿಗೆ ಸೇರಿದ್ದು ತಾನೆ?..ಹಾಗಾಗಿ ತನ್ನ ವರದಿಯಲ್ಲಿ ಇಂತಾ ಮಸಾಲೆಯೆಲ್ಲಾ ಇರಲೇ ಬೇಕು! ಎಂದು ಚಾನೆಲ್ ಮಾಲೀಕರು ಬಯಸುತ್ತಾರೆ!.. ಸಾರ್ವಜನಿಕರಿಗೆಲ್ಲಾ ವಿಪರೀತ ಕಷ್ಟ ಕೊಟ್ಟು. ಅಂಗಡಿ ಮುಂಗಟ್ಟಲನ್ನೆಲ್ಲಾ ಮುಂಚೆಯೇ ಮುಚ್ಚಿಸಿ , ಆ ಮೆಳ್ಳಂದೂರು ಕೆರೆಯ ಮುಂಭಾಗದಲ್ಲಿರುವ ಪುರಾತನ ಷಿಯಾ ಮಸೀದಿಯ ಹಾಲಿನಲ್ಲಿ ದೇಶದ ಪ್ರತಿಷ್ಟಿತ ಅಲ್ಪಸಂಖ್ಯಾತ ಷಿಯಾ ಮುಸ್ಲಿಮ್ ಮಹನೀಯರ ಸಮ್ಮೇಳನವಂತೆ..ಆ ಮಸೀದಿಗೆ ಎದುರಿನಲ್ಲಿದ್ದ ಹೊಸ ಮೇಲ್ಸೇತುವೆ ಮೇಲಂತೂ ಆರ್ಮಿಯ ಸೆಕ್ಯುರಿಟಿ ಸರ್ಪಗಾವಲು...’ಶಾಂತಿಗೆ ತಾವು ತೆರುವ ಬೆಲೆ ಅಂದರೆ ಜನಸಾಮಾನ್ಯನ ಸ್ವಾತಂತ್ರ್ಯ ಹರಣವೇ?..ಈ ವಿ ಐ ಪಿ ಕಲ್ಚರ್ ಹೋಗಬೇಕು ’...ಎಂದು ತಾನಿಂದು ವರದಿಯಲ್ಲಿ ಟೀಕಿಸಬೇಕು ಎಂದುಕೊಳ್ಳುತ್ತಾ ಮನೆಯ ಹೊರಗೇ ನಿಲ್ಲಿಸಿರುತ್ತಿದ್ದ ಮಾರುತಿ ರಿಟ್ಸ್ ಕಾರ್ ಹತ್ತಿ ಚಾವಿ ತಿರುಗಿಸದಳು..”ಓಹ್, ನೋ” ಎಂದು ಉದ್ಗರಿಸಿದಳು ಕಾರಿನ ಡ್ಯಾಶ್ ಬೋರ್ಡ್ ನೋಡುತ್ತಾ.. ‘ಛೆ,ಪೆಟ್ರೋಲ್ ಸ್ವಲ್ಪವೇ ಮಿಕ್ಕಿದೆ, ಇವತ್ತೇ ಹಾಕಿಸಬೇಕು..ತನಗೆ ಯಾವತ್ತು ಬಹಳ ಬಿಝಿ ಇರುತ್ತದೋ, ಅವತ್ತೇ ಈ ಕೆಲಸವೂ ಅಂಟಿಕೊಳ್ಳುತ್ತದೆ ’ ಎಂದು ಗೊಣಗಿಕೊಳ್ಳುತ್ತಾ ವೇಗವಾಗಿ ಸಮ್ಮೇಳನದ ಸ್ಪಾಟಿನತ್ತ ಕಾರ್ ನೆಡೆಸಿದಳು ಧೃತಿ...

“ಎ.ಸಿ. ಭರತ್ ಹೆಗ್ಡೆ, ಅಲ್ಲಿ ಎಲ್ಲಾ ವ್ಯವಸ್ಥೆ ಸುಗಮವಾಗಿದೆ ತಾನೆ?” ಎಂದು ತಮ್ಮ ಮಾಮೂಲಿ ಗೊಗ್ಗರು ಕಂಠದಲ್ಲಿ ಪ್ರಶ್ನಿಸಿದರು ಡಿ. ಐ.ಜಿ ಕಾಂತರಾಜ್, ವಯರ್ಲೆಸ್ಸ್ ಸೆಟ್‌ನಲ್ಲಿ.

“ಯೆಸ್ ಸರ್..!”ಎಂದು ತನ್ನ ಕಪ್ಪು ಗುಂಗುರು ಕೂದಲಲ್ಲಿ ಕೈಯಾಡಿಸುತ್ತಾ ನೀಳವಾಗಿ ಉಸಿರೆಳುದುಕೊಂಡ ಭರತ್ ಹೆಗ್ಡೆ, ಆ ಸಮ್ಮೇಳನದ ಸ್ಪಾಟಿನಲ್ಲಿದ್ದ ಆ ಪ್ಲೈ-ಓವರ್ ಬ್ರಿಡ್ಜಿನ ಮೇಲಿಂದ.... ಇದು ಅರ್ಧಗಂಟೆಯಲ್ಲಿ ಅವರ ಎರಡನೆ ಕಾಲ್! ತನ್ನನ್ನು ಅವರೇನಂದುಕೊಡಿದ್ದಾರೆ..?

“ ಸರ್, ನೀವೇನೂ ಚಿಂತಿಸಬೇಡಿ..ಈ ಸೇತುವೆ ಮೇಲೆ ಎಸೆನ್ಷಿಶಿಯಲ್ ಸರ್ವೀಸಸ್ ಮತ್ತು ಸರ್ಕಾರಿ ವೆಹಿಕಲ್ಸ್ ಬಿಟ್ಟು ಮತ್ಯಾರಿಗೂ ಪರ್ಮಿಟ್ ಮಾಡ್ತಿಲ್ಲ...ಇನ್ನು ಆ ಸೇತುವೆಯ ಆ ಭಾಗದಲ್ಲಿ ಮನೆಗಳಿರುವ ನಿವಾಸಿಗಳಿಗೂ ಐ ಡಿ ಕೊಟ್ಟು ಮೇಲೆ ಬಿಡುತ್ತಿದ್ದೇವೆ...ಪೋಲಿಸ್ ಕೂಡಾ ನಮ್ಮ ಜತೆ ಸಹಕರಿಸುತ್ತಿದೆ.. ಆದ್ದರಿಂದ..” ಎನ್ನುತ್ತಿದ್ದಂತೆಯೇ,

“ ಸೇತುವೆ ಬಗ್ಗೆ ಅಷ್ಟು ಚಿಂತೆಯಿಲ್ಲ, ಆ ಸೇತುವೆಯ ಎದುರಿಗೆ ಇರುವ ಷಿಯಾ ಮಸೀದಿ ಹಾಲಿನ ಬಗ್ಗೆ ಹೆಚ್ಚು ಕಾಳಜಿ ಅಷ್ಟೇ. ಅಷ್ಟೊಂದು ಅಲ್ಪಸಂಖ್ಯಾತರ ನ್ಯಾಷನಲ್ ಲೆವೆಲ್ ಲೀಡರ್ಸ್ ಮತ್ತು ಸೆಲೆಬ್ರಿಟೀಸ್ ಒಟ್ಟಿಗೆ ಸೇರಿರುವುದು ಅಪರೂಪ...ಹೋಮ್ ಮಿನಿಸ್ಟರ್ರೇ ಗಂಟೆಗೊಮ್ಮೆ ವಿಚಾರಿಸುತ್ತಿದ್ದಾರೆ ...ಎನಿವೇ, ನಮ್ಮ ಜವಾಬ್ದಾರಿ ನಮಗೆ ಗೊತ್ತಿದ್ದರೆ ಸಾಕು!...” ಎಂದು ತಮ್ಮ ಮಾತನ್ನೇ ಕೊನೆಯದಾಗಿಸಿ ಮುಗಿಸಿದ್ದರು ಡಿ. ಐ.ಜಿ ಸಾಹೇಬರು.

ಈಗ ಅರ್ಧ ಗಂಟೆಗೆ ಮುಂಚೆಯೇ ಭರತ್ ತಾನೇ ಮಸೀದಿಯ ಒಳಹೋಗಿ ಅಲ್ಲಿನ ಮುಖ್ಯಸ್ತರಾದ ಮುಲ್ಲಾ ಹುಸೇನ್ ಸಾಹೇಬರನ್ನೂ, ದಿಲ್ಲಿಯಿಂದ ವಿಶೇಷವಾಗಿ ಬಂದಿದ್ದ ಷಿಯಾ ಸಮುದಾಯದ ನೇತಾ ಹಶ್ಮಿ ಸಾಹೇಬ್ ರನ್ನೂ ಭೇಟಿ ಮಾಡಿ ಅವರನ್ನು ಕಳಕಳಿಯಿಂದ ವಿಚಾರಿಸಿಕೊಂಡಿದ್ದ. ಮುಲ್ಲಾ ಹುಸೇನ್ ಸಾಹೇಬರಂತೂ ತಮ್ಮ ನೆರೆತ ಬಿಳಿ ಸಿಲ್ಕಿನಂತಾ ಗಡ್ಡ ನೀವಿಕೊಳ್ಳುತ್ತಾ ತಮ್ಮ ಅಳಲನ್ನು ನಿವೇದಿಸಿದ್ದರು, “ ನೋಡಿ ಭರತ್ ಭಾಯಿ..ನಾವು ಶಾಂತಿ ಪ್ರಿಯರು..ಇಸ್ಲಾಮ್ ಹೆಸರಿನಲ್ಲಿ ಜಗತ್ತಿಗೆ ಮಾಡಬಾರದ ಅನ್ಯಾಯ ಮಾಡಿ, ನಮ್ಮೆಲ್ಲರನ್ನೂ ದುಷ್ಟ ರಾಕ್ಷಸರೆಂಬಂತೆ ಬಿಂಬಿಸುವಂತೆ ಮಾಡುತ್ತಿದೆ, ಈ ಸುನ್ನಿಗಳೇ ಹೆಚ್ಚಾಗಿರುವ ಜಿಹಾದಿ ಭಯೋತ್ಪಾದಕರ ಜಾಲ...ನಾವು ಇದರ ವಿರುದ್ಧವಾದ ಪರಿಕಲ್ಪನೆಯನ್ನು ಸಮಾಜದಲ್ಲಿ ತರಲು, ಮುಖ್ಯವಾಹಿನಿಯಲ್ಲಿ ಮುಸ್ಲಿಮರೆಲ್ಲರೂ ಈಗಿರುವ ಸಂಶಯದ ಪರದೆ ದಾಟಿ ಬೆರೆಯಲು, ಬೆಳೆಯಲು ಸೂಕ್ತ ಅವಕಾಶ ಮಾಡಿಕೊಡಬೇಕೆಂಬ ಕನಸು ಹೊತ್ತವರು...” ಎಂದಿದ್ದರು

ಹಶ್ಮಿ ಸಾಹೇಬರೂ ತಲೆಯಾಡಿಸಿ, “ ಹೌದು, ಅದಕ್ಕಾಗಿಯೇ ಈ ‘ಅಮನ್ ಕಿ ಪೈಗಾಮ್ ’ ಅಂದರೆ ಶಾಂತಿ ಸಂದೇಶವನ್ನು ಭಿತ್ತರಿಸಲು ಇಂದು ಸೇರಿದ್ದೇವೆ... ತೀವ್ರವಾದ ಮತ್ತು ಭಯೋತ್ಪಾದನೆ ಇಸ್ಲಾಮಿಗೆ ದೂರ ಎಂದು ಘಂಟಾಘೋಷವಾಗಿ ಸಾರಲಿದ್ದೇವೆ.. ನಮ್ಮ ಸಮರ್ಥನೆಗಾಗಿ ಹಲವು ಕವಿ- ವಿದ್ವಾಂಸರನ್ನೂ ಕರೆಸಿದ್ದೇವೆ ...ಅದಕ್ಕೇ ಅತಿ ಹೆಚ್ಚಿನ ಸಂಖ್ಯೆಯ ಷಿಯಾ ಭಕ್ತರು ಇಂದು ಬರುವುವರಿದ್ದಾರೆ...ನಮ್ಮ ಸಮ್ಮೇಳನ ಯಾವ ಪ್ರತಿಭಟನೆಯ ಅಡ್ಡಿ ಆತಂಕವಿಲ್ಲದೇ ನೆಡೆದು ಹೋದರೆ, ನಮ್ಮ ದೇಶದ ಈ ಅಭೂತಪೂರ್ವ ಯಶಸ್ಸಿನ ರೂವಾರಿ ನೀವೇ ಆಗುವಿರಿ..”ಎಂದೆಲ್ಲಾ ಅವನ ಮೇಲೆ ತಾವಿಟ್ಟಿದ್ದ ವಿಶ್ವಾಸ ಮತ್ತು ನಿರೀಕ್ಷೆಯನ್ನು ಒತ್ತಿ ಹೇಳಿದ್ದರು.

ಭರತ್ ಕೂಡಾ ಅವರಿಗೆ ಧೈರ್ಯ ತುಂಬುತ್ತಾ,:” ನೀವು ಮಾಡರೇಟ್ಸ್ ಎಂದು ನಾನೂ ಬಲ್ಲೆ..ಹಾಗಾಗಿ ಸುರಕ್ಷತೆ –ಶಾಂತಿಯ ಬಗ್ಗೆ ಚಿಂತಿಸದಿರಿ..ನಾವು ಸೈನಿಕರೂ ಶಾಂತಿ ಪ್ರಿಯರೇ, ಆದರೆ ಅಶಾಂತಿ ಎಬ್ಬಿಸುವವರ ಪಾಲಿಗೆ ಮಾತ್ರ ಯಮಸ್ವರೂಪಿಗಳಾಗುತ್ತೇವೆ ಅಷ್ಟೇ...ನಿಮಗೆ ಯಾವುದೇ ಕಷ್ಟ- ತೊಂದರೆ ಕಂಡು ಬಂದಲ್ಲಿ ತಕ್ಷಣವೇ ನನಗೆ ಕಾಲ್ ಮಾಡಿ” ಎಂದು ತನ್ನ ಮೊಬೈಲ್ ನಂಬರನ್ನು ಇತ್ತು ಅಲ್ಲಿ ನೆರೆದಿದ್ದ ಆ ಮತದ ಹಿರಿಯರಿಗೆ ವಂದಿಸಿ ಹೊರಬಂದಿದ್ದನು.

ಈಗಾಗಲೇ ಸಮ್ಮೇಳನಕ್ಕೆ ಬರುತ್ತಿರುವ ಅತಿಥಿಗಳ ಸಂಖ್ಯೆ ಗಣನೀಯವಾಗಿ ಏರಿದೆ..ವಾಹನಗಳನ್ನು ಪಾರ್ಕ್ ಮಾಡಲು ನಾಗರೀಕರು ಎಂದಿನಂತೆ ಪರದಾಡುತ್ತಿದ್ದಾರೆ...ಆದರೆ ತಾನು ಆ ಬಗ್ಗೆ ತಲೆ ಕೆಡೆಸಿಕೊಳ್ಳಬೇಕಾಗಿಲ್ಲ...ಅದಕ್ಕಾಗಿ ಟ್ರಾಫಿಕ್ ಪೋಲೀಸರ ದೊಡ್ಡ ತಂಡವೇ ನೇಮಕವಾಗಿದೆ.

ಹಾಗೇ ಸೇತುವೆಯ ಮೇಲೆ ನೆಡೆದು ಹೋಗುವಾಗ ಭರತ್ ಸುತ್ತಲೂ ಒಮ್ಮೆ ದೃಷ್ಟಿ ಹಾಯಿಸಿದ...ತನ್ನ ಬಲ ಭಾಗದಲ್ಲಿದ್ದ ಈ ಮಸೀದಿಯು ಇಂದು ಅತಿಥಿಗಳ ಚಟುವಟಿಕೆಯ ಆಗರವೇ ಆಗಿದ್ದರೂ, ಎಡಭಾಗದಲ್ಲಿದ್ದ ನಿರ್ಜನವಾದ ಮೆಳ್ಳಂದೂರು ಕೆರೆ ಮಾತ್ರ ತನ್ನ ಮಲಿನಗೊಂಡ ನೀರನ್ನು ಹಗಲಿನ ಬೆಳಕಿನಲ್ಲಿ ಮಿನುಗಿಸುತ್ತಾ ಶಾಂತವಾಗಿ ವೀಕ್ಷಿಸುತ್ತಿರುವಂತಿದೆ...ಎಂತಾ ವಿಪರ್ಯಾಸ ಎಂದುಕೊಂಡು ಮುನ್ನೆಡೆದ, ಎಲ್ಲರ ಸುರಕ್ಷತೆಯ ಜವಾಬ್ದಾರಿಯನ್ನು ತಲೆಯ ಮೇಲೆಯೇ ಹೊತ್ತ ಅಧಿಕಾರಿ.

ಮತ್ತೆ ಮತ್ತೆ ತನ್ನ ಸೆಕ್ಯುರಿಟಿ ತಂಡದವರು ಆ ಸೇತುವೆಯ ದ್ವಾರದಲ್ಲಿ ಮಾಡುತಿದ್ದ ಎಲ್ಲ ವ್ಯವಸ್ಥೆಯನ್ನೂ ಚಾಚೂ ತಪ್ಪದಂತೆ ಪುನರ್-ಪರಿಶೀಲನೆ ಮಾಡಹತ್ತಿದ ಭರತ್...ಸಮಯ ಎಂಟೂವರೆ ಆಗಿದೆ, ಇನ್ನೂ ಕಾರ್ಯಕ್ರಮಕ್ಕೆ ಒಂದೂವರೆ ಗಂಟೆ ಸಮಯವಿದೆ!. ಯಾಕೋ ಸ್ವಲ್ಪ ಹಸಿವಾಗುತ್ತಿದೆ, ಸರಿಯಾಗಿ ತಿಂಡಿ ತಿಂದಿಲ್ಲ.. ಕನಿಷ್ಟ ಪಕ್ಷ ಯಾರಾದರೂ ಕಾಫಿ ವ್ಯವಸ್ಥೆ ಮಾಡಿರಬಹುದೆ? ಎಂಬ ಆಲೋಚನೆಯೂ ಸುಳಿದು ಹೋಯಿತು...


ನಗರದ ಉತ್ತರ ಹೊರವಲಯದ ನ್ಯಾಷನಲ್ ಆಯಿಲ್ ಸರ್ಕಾರಿ ತೈಲ ಕಂಪನಿಯ ಪೆಟ್ರೋಲ್ ಟರ್ಮಿನಲ್ ಡಿಪೋದಲ್ಲಿ ಎಂದಿನಂತೆ ಗೇಟ್ ಬಳಿ ಸಾಲು ಸಾಲಾಗಿ ಆಯಿಲ್ ಟ್ಯಾಂಕರ್ ಲಾರಿಗಳು ಕಾದು ನಿಂತಿವೆ...

“ಒಂದು ಗೇಟ್ ಪಾಸ್ ಕೊಡಲು ಎಷ್ಟೊತ್ತಯ್ಯಾ ಮಾಡ್ತೀಯಾ, ತೂಂಗು ಮೂಂಜಿ? ”ಎಂದು ಕ್ಯಾಬಿನ್ ನಲ್ಲಿ ಕುಳಿತು ಮೆಲ್ಲಗೆ ಪಾಸ್ ಬರೆಯುತ್ತಿದ್ದ ಮಣಿಗೆ ಝಾಡಿಸಿದನು ಡ್ರೈವರ್ ಅನ್ವರ್..ಅವನದೇ ಮೊದಲ ಭರ್ತಿ ಟ್ಯಾಂಕರ್...ಅದೂ ಎಂದಿನಂತೆ...

“ಪೆಟ್ರೋಲ್ ತಗೊಂಡು ಬಂಕಿಗೆ ತಾನೆ ಓಗ್ತೀಯಾ?.. ಏನೋ ನಿನ್ನ ನಿಕಾನೇ ಮಿಸ್ ಆಗೋಗೋ ತರಹ...ಓಹೋ..”ಎಂದು ಹಲ್ಲು ಕಿರಿದು ಹಳೇ ಗೆಳೆಯನತ್ತ ನೋಡಿದ ಮಣಿ...ಹತ್ತು ವರ್ಷಗಳಿಂದ ನೋಡಿದ್ದಾನೆ, ಬಕ್ರೀದ್‌ಗೆ ತಪ್ಪದೇ ಕುರಿ ಭೋಜನ ಕೊಡಿಸ್ತಾನೆ, ರಮ್ಝಾನ್ ಗೆ ತನ್ನ ಮನೆಗೆ ಬಂದು ದಾನ ಕೊಡುತ್ತಾನೆ ಅನ್ವರ್..ಆದರೆ ಸಿಟ್ಟು ಮಾತ್ರ ಹೋಗಲ್ಲ...ಜನ್ಮಕ್ಕಂಟಿದ್ದ ಶಾರ್ಟ್ ಟೆಂಪರ್..ಅದು ಬಿಟ್ಟರೆ ಇನ್ಯಾವ ದುಷ್ಟ ಗುಣವೂ ಇಲ್ಲ ಅವನಿಗೆ..

“ ಇವತ್ತು ನಿಕಾ ಅಲ್ಲಾ, ಅದಕ್ಕಿಂತಾ ಅರ್ಜೆಂಟ್ ಪರ್ಸನಲ್ ಕೆಲ್ಸ ಇದೆ ಕಣೋ...ಕೊಡು , ಕೊಡು!” ಎಂದು ಅವಸರವಸವಾಗಿ ಮಣಿ ಕೊಟ್ಟ ಪಾಸ್ ಕೈಗೆ ತಗೊಂಡು ಜೇಬಿಗೆ ತುರುಕಿ, ಎಂಜಿನ್ ಸ್ಟಾರ್ಟ್ ಮಾಡಿ , ದಡಬಡನೆ ಗೇರ್ ಬದಲಿಸುತ್ತಾ ಅಲ್ಲಿಂದ ಹೊರಟೇ ಬಿಟ್ಟನು ಅನ್ವರ್...

ಮುಖ್ಯ ರಸ್ತೆ ತಲುಪಿದ ಅನ್ವರ್ ಸಮಯ ನೋಡಿದ..ಎಂಟೂವರೆ ಗಂಟೆ, ಅದೂ ಎಂದಿನಂತೆ...ಆದರೆ ಒಂದು ಮಾತ್ರ ಇಂದು ಎಂದಿನಂತಲ್ಲ ಎಂದು ತನಗೆ ತಾನೇ ಹೆಮ್ಮೆ ಪಡುತ್ತಾ ಯೋಚಿಸಿದ ಅನ್ವರ್...

ಜನ್ಮಕ್ಕೊಂದೇ ಬಾರಿ ಅದೃಷ್ಟವಂತ ಮುಸ್ಲಿಮನಿಗೆ ಬರುವಂತಾ ಸುದಿನ ಇಂದು.. ಹಾಗೆಂದು ಬಾರಿ ಬಾರಿಯಾಗಿ ಹೇಳಿರಲಿಲ್ಲವೆ ತನ್ನ ರೆಕ್ರೂಟರ್?... ಕಾಶ್ಮೀರಿನಿಂದ ಬಂದ ಕಾಸಿಂ ಭಾಯ್!...ಆರು ತಿಂಗಳ ಕೆಳಗೆ, ತನ್ನಂತಾ ನಾಲ್ಕೇ ಜನರ ಪುಟ್ಟ ಗುಂಪನ್ನು ಉದ್ದೇಶಿಸಿ, ಊರಾಚೆಯ ಸ್ಮಶಾನದ ಹಿಂದಿನ ಪಾಳು ಮನೆಯಲ್ಲಿ!... ಇನ್ನೂ ಕಿವಿಯಲ್ಲಿ ಗುಂಯ್ ಗುಡುತ್ತಿದೆ ಅವನ ಭಾಷಣ..‘ಆ ಬೆನ್ನೆಲುಬಿಲ್ಲದ ದ್ರೋಹಿ ಷಿಯಾಗಳು ನಮ್ಮ ಸುನ್ನಿ ಜನರ ಆಶಯಗಳಿಗೆ ಮಣ್ಣು ಹಾಕುವ ಕುತಂತ್ರ ಮಾಡಿದ್ದಕ್ಕೆ ಅವರನ್ನು ಸುಮ್ಮನೆ ಬಿಡಬೇಕೆ? ಕಭೀ ನಹಿ!...ಅಮನ್ ಅಂತೆ, ಛೆ!...ನಿಜವಾದ ಶಾಂತಿ? ಇನ್ಸಾಫ್ ಇಲ್ಲದ ಈ ದೇಶದಲ್ಲಿ, ಸರ್ಕಾರದ ಏಜೆಂಟರಂತೆ ಕೆಲಸ ಮಾಡತೊಡಗಿದ್ದಾರಲ್ಲಾ, ಇನ್ನೆಲ್ಲಿ ನಮಗೆ ಶಾಂತಿ?... ಅವರನ್ನು ಮಟ್ಟ ಹಾಕಿ ಮುಗಿಸಿದರೆ ಮಾತ್ರ ನಾವು ಜನ್ನತ್‍ಗೆ ಹೋಗುವುದು...ಆತ್ಮಹತ್ಯೆ ಪಾಪವಲ್ಲ... ಅಲ್ಲಾಗಾಗಿ ಫಿದಾಯೀನ್ ಆಗಿ ಬನ್ನಿ’..ಎಂದು ಭಾವುಕನಾಗಿ ಆವೇಶದಿಂದ ಎಷ್ಟು ಪ್ರಾಮಾಣಿಕವಾಗಿ ಮಾತನಾಡಿದ್ದ ಕಾಸೀಂ ಭಾಯ್! ಆಗ ತನ್ನೆದೆಯಲ್ಲಿ ಹುದುಗಿದ್ದ ಯಾವುದೋ ಅನ್ಯಾಯದ ಕಿಚ್ಚು, ನೋವಿನ ನೆನಪು ಜ್ವಲಂತವಾಗಿ ಬಿಟ್ಟಿತ್ತಲ್ಲಾ...ತಾನೂ ರಾತ್ರಿಯೆಲ್ಲಾ ಹೊರಳಿ, ಯೋಚಿಸಿ ನಿದ್ದೆ ಬಾರದೇ ಎದ್ದು ಮುಂದಿನ ದಿನವೇ ತನ್ನ ಕುರುಡು ಅಮ್ಮಿ ಜಾನ್ ಮತ್ತು ತಂಗಿ ಜಹೀರಾಗೆ ಏನೂ ಹೇಳದೇ ಕಾಸಿಂ ಹೇಳಿದ ಸೀಕ್ರೆಟ್ ಮಿಷನ್ನಿಗೆ ಸೇರ್ಪಡೆಯಾಗಿದ್ದ...

ಆ ದಿನದಿಂದ ಮೊನ್ನೆಮೊನ್ನೆಯವರೆಗೆ ಬರೇ ಪ್ರಚಾರ ಭಾಷಣವನ್ನಷ್ಟೇ ಕೇಳಿ ಉತ್ತೇಜಿತನಾಗುತ್ತಿದ್ದ, ಪ್ರಾಣತ್ಯಾಗಕ್ಕಾಗಿಯೂ ಮಾನಸಿಕವಾಗಿ ಸಿದ್ಧನಾಗಿ ಕೇವಲ ಒಂದು ಅವಕಾಶಕ್ಕಾಗಿ ತಹತಹಿಸುತ್ತಿದ್ದವನಿಗೆ ಬಂದಿತ್ತು ಈ ಬುಲಾವ್...

ಕಾಸೀಂ ಭಾಯ್ ಈ ಯೋಜನೆಗೆ ಬೇಕಾದ ಮಾಹಿತಿಯನ್ನೆಲ್ಲಾ ತನ್ನ ಗೂಡಚಾರರಿಂದ, ಬೆಂಬಲಿಗರಿಂದ ಸಂಗ್ರಹಿಸಿ ತನಗೆ ಮತ್ತು ತನ್ನ ಪೆಟ್ರೋಲ್ ಬಂಕಿನ ಗೆಳೆಯ ಅಬೀದ್‍ಗೆ ವಿವರಿಸಿದ್ದ:

“ಈ ಷಿಯಾ ಸಮ್ಮೇಳನ ವ್ಯವಸ್ಥೆ ಮಾಡಿದವರಿಗೆ ಮರೆಯದ ಪಾಠ ಕಲಿಸಬೇಕು...ಅಲ್ಲಿ ನೆರೆದಿದ್ದ ಇಸ್ಲಾಮ್ ದ್ರೋಹಿಗಳನ್ನೆಲ್ಲಾ ಜಹನ್ನುಮ್ ( ನರಕ) ಗೆ ಒಟ್ಟಿಗೇ ಕಳಿಸಬೇಕು...ಅನ್ವರ್ ನೀನು ಇದಕ್ಕೆ ಫ಼ಿದಾಯೀನ್( ಆತ್ಮಾಹುತಿ ದಾಳಿಕೋರ) ಆಗುತ್ತೀ… ನಿನ್ನ ಪೆಟ್ರೋಲ್ ಟ್ಯಾಂಕರೇ ಇದಕ್ಕೆ ಮುಖ್ಯ ಆಯುಧ..ನೀನು ಎಂದಿನಂತೆ ಅಬೀದ್ ಕೆಲಸ ಮಾಡುವ ಬಂಕಿಗೆ ಹೋದರೆ ಸಾಕು..ಅದೂ ಷಿಯಾ ಮಸೀದಿಯ ವಿರುದ್ಧ ದಿಕ್ಕಿನಲ್ಲಿದೆ, ಸ್ವಲ್ಪ ನಿರ್ಜನ ಸ್ಥಳ… ನೀನಲ್ಲಿಗೇ ಹೋಗುತ್ತೀ ಎಂದು ಗೇಟ್ ಪಾಸ್ ಮಾಡಿಸಿಕೋ. ಎಂದಿನಂತೆ ೯ ಗಂಟೆಗೆ ಅಲ್ಲಿಗೆ ನೀನು ತಲುಪಬೇಕು, ಎಲ್ಲವೂ ದೈನಂದಿನ ಕೆಲಸದಂತೆಯೇ ಇರಬೇಕು..…ಅಬೀದ್ ತನ್ನ ಪೆಟ್ರೋಲ್ ಬಂಕಿನಲ್ಲಿ ನಿನ್ನ ಟ್ಯಾಂಕರಿಗೆ ಬಾಂಬ್ ಕಟ್ಟಲು ನಮಗೆ ನೆರವಾಗಲು ಒಪ್ಪಿದ್ದಾನೆ..ಮೊದಲು ಅವನೂ ನೀನು ಸೇರಿ ಆ ಬಂಕಿನ ಇನ್ನೊಬ್ಬ ಕೆಲಸಗಾರ ಶಂಕರ್‌ನನ್ನು ಕೈ ಕಾಲು ಕಟ್ಟಿ ಗ್ಯಾರೇಜಿನಲ್ಲಿ ಬೀಗ ಹಾಕಿ ಬರುತ್ತೀರಿ..ಅಲ್ಲಿದ್ದ ಕ್ಯಾಷ್ ಕೌಂಟರ್ ಖಾಲಿ ಮಾಡಿ ಹಾಗೆ ಬಿಟ್ಟು ಇದು ಕೇವಲ ಕಳ್ಳತನ ಎಂದೇ ಅವನಿಗೂ, ಆನಂತರ ಯಾರಾದರೂ ಬಂದರೆ ಅವರಿಗೂ ಖಾತರಿಯಾಗುವಂತೆ ಸುಳ್ಳು ಸುಳಿವು ಬಿಟ್ಟುಬಿಡಿ.. ನಮ್ಮವರು ಆ ಬೆಳಿಗ್ಗೆ ಮುಂಚೆಯೇ ಯಾರಿಗೂ ಕಾಣದಂತೆ ಅಬೀದ್‌ಗೆ ಪ್ಲಾಸ್ಟಿಕ್ ಸ್ಪೋಟಕವಿರುವ ಸುಲಭವಾದ ಸೈಜಿನ ಬಾಂಬ್ ಕೊಟ್ಟಿರುತ್ತಾರೆ. ಶಂಕರ್‌ನನ್ನು ದೂರ ಮಾಡಿದ ಮೇಲೆ ನೀವಿಬ್ಬರೂ ಸೇರಿ ಟ್ಯಾಂಕರ್ ಬುಡಕ್ಕೆ ಅದನ್ನು ಕಟ್ಟಬೇಕು..ಇದು ಯಾರಿಗೂ ಗೊತ್ತಾಗದ ಸ್ಥಳದಲ್ಲಿರುವಂತೆ ನಾನು ಹೇಳಿಕೊಡುತ್ತೇನೆ.. ನಮ್ಮ ಬಾಂಬ್ ಆ ಬ್ರಿಡ್ಜಿನ ಸೆಕ್ಯುರಿಟಿಯವರ ಚೆಕಿಂಗನ್ನು ಪಾಸ್ ಮಾಡುತ್ತದೆ.. ಅವರು ಅಂದು ಹೆಚ್ಚಾಗಿ ಪೆಟ್ರೋಲ್ ಟ್ಯಾಂಕರ್ ಗಳನ್ನು ಚೆಕ್ ಮಾಡುವುದಿಲ್ಲ..ಒಂದು ತಿಂಗಳ ನಂತರ ಈಗ ತಾನೇ ಪೆಟ್ರೋಲ್ ಡೀಸೆಲ್ ಸರಬರಾಜುದಾರರ ಮುಷ್ಕರ ನಿಂತು ಬಂಕ್ ಗಳಿಗೆ ಸಪ್ಲೈ ಬರಹತ್ತಿದೆ, ನಗರದಲ್ಲಿ ಅದಕ್ಕಾಗಿ ಬೇಡಿಕೆ ಹೆಚ್ಚಾಗಿ ಹಾಹಾಕಾರವಿದೆ..ಹಾಗಾಗಿ ಈ ನ್ಯಾಷನಲ್ ಆಯಿಲ್ ಸರ್ಕಾರಿ ಕಂಪನಿಯ ತೈಲ ಟ್ಯಾಂಕರ್ ಸುಲಭವಾಗಿ ಪಾಸ್ ಆಗಿ ಬ್ರಿಡ್ಜ್ ಏರಲಿದೆ ಎಂದು ನನ್ನ ನಂಬಿಕೆ..ಅನ್ವರ್, ನೀನ್ಯಾವ ರೀತಿಯ ಅನುಮಾನವೂ ಬರದಂತೆ ಶಾಂತವಾಗಿ, ಒಂದು ಸಾಧಾರಣ ದಿನ, ಓರ್ವ ಡ್ರೈವರ್ ಡ್ಯೂಟಿ ಮಾಡುವವನಂತೆಯೆ ಅವರ ಮುಂದೆ ವರ್ತಿಸಬೇಕು. ಒಮ್ಮೆ ಅವರು ಬ್ರಿಡ್ಜ್ ಏರಲು ಬಿಟ್ಟರಂದರೆ ಮುಗಿಯಿತು, ಆಗ ಹತ್ತು ಗಂಟೆಯಾಗಿರುತ್ತದೆ, ಸಮ್ಮೇಳನ ಷಿಯಾ ಮಸೀದಿಯಲ್ಲಿ ಆರಂಭವಾಗಿಬಿಟ್ಟಿರುತ್ತದೆ..ಅನ್ವರ್ ನೀನು ಅತಿ ವೇಗವಾಗಿ ಸಾಗುತ್ತಾ ಮಸೀದಿಯ ಬದಿಗೆ ಬಂದಾಗ ಆ ಬ್ರಿಡ್ಜಿನ ಬದಿಯ ರೈಲಿಂಗ್ಸ್ ಕಡೆಗೆ ಗುರಿಯಿಟ್ಟು ಟ್ಯಾಂಕರನ್ನು ಗುದ್ದಿ, ಬ್ರಿಡ್ಜಿನಿಂದ ಹೊರಕ್ಕೆ ಚಿಮ್ಮಿ ಹಾರಿ ಮಸೀದಿಯ ಕಟ್ಟಡದ ಮೇಲೆ ನೇರವಾಗಿ ಎರಗುತ್ತೀಯೆ..ಇದಕ್ಕೆ ತಕ್ಕ ಕೌಶಲ್ಯ ನಿನಗಿದೆ…ಆ ಬ್ರಿಡ್ಜಿನ ರೈಲಿಂಗ್ಸ್ ಹಳೇ ಸ್ಟೀಲಿನವು, ತುಕ್ಕು ಹಿಡಿದಿವೆ..ನಿನಗೆ ಅದನ್ನು ಗುದ್ದಿ ಮುರಿದು ಇಡೀ ಟ್ಯಾಂಕರನ್ನು ಕೆಳಕ್ಕೆ ಬೀಳಿಸಲು ಕಷ್ಟವಾಗುವುದಿಲ್ಲ…ಸ್ವಲ್ಪ ಹೆಚ್ಚು ಕಡಿಮೆಯಾದರೂ, ಏನೂ ತೊಂದರೆಯಿಲ್ಲ…ಆ ಬಾಂಬ್ ಬಹಳ ಶಕ್ತಿಯುತವಾಗಿ, ಹೆಚ್ಚು ದೂರಕ್ಕೆ ಹರಡುವ ಶಕ್ತಿಯುಳ್ಳದು..ಕೆಳಗೆ ಅಪ್ಪಳಿಸಿದಕ್ಕೆ ತಾನೇ ಸ್ಪೋಟಗೊಳ್ಳುವ ಇಂಪ್ಯಾಕ್ಟ್ ಟೈಪಿನದು .ಜತೆಗೆ ನಮ್ಮ ಎರಡನೆ ಅಸ್ತ್ರ...ಪೆಟ್ರೋಲ್…ಆಗ ಕೆಲಸಕ್ಕೆ ಬರುತ್ತದೆ…ಬಾಂಬ್ ಸಿಡಿತಕ್ಕೆ ಪೆಟ್ರೋಲ್ ಹತ್ತಿಕೊಂಡು ಧಗ್ಗನೆ ಇಡೀ ಮಸೀದಿಯನ್ನು ಜ್ವಾಲಾಮುಖಿಯಂತೆ ಕಬಳಿಸುವುದು..!! ದ್ರೋಹಿ ಶತ್ರುಗಳೆಲ್ಲಾ ಬೆಂಕಿಗೆ ಆಹುತಿಯಾಗಿ ಸತ್ತು ಹೋಗುವರು....ಅನ್ವರ್, ನೀನು ‘ಅಲ್ಲಾ ಹೋ ಅಕ್ಬರ್ ’ ಎಂದು ಕೂಗುತ್ತಲೇ ಪ್ರಾಣ ಬಿಡಬೇಕು..ನಿನ್ನದು ಪುಣ್ಯವಂತ ಜನ್ಮ..ಆತ್ಮಾಹುತಿಯಿಂದ ಜನ್ನತ್ ಸೇರಿ ಸದ್ಗತಿ ಹೊಂದುತ್ತೀಯೆ, ಅಬೀದ್ ಸದ್ಯ, ನೀನು ಒಬ್ಬಂಟಿ..ನೀನು ಸ್ವಲ್ಪ ದಿನ ಯಾರಿಗೂ ಸಿಗದಂತೆ ಬೇರೆ ಊರಿನ ಟ್ರೈನ್ ಹತ್ತಿಬಿಡು.ಯಾರಾದರೂ ವಿಚಾರಿಸಿದರೆ ಅಜ್ಮೇರಿನ ದರ್ಗಾ ನೋಡಲು ಹೊರಟೆ ಅಂದು ಬಿಡು .ಅರ್ಥ ಆಯಿತೆ?”

ಉಸಿರು ಬಿಗಿ ಹಿಡಿದು ಆಸಕ್ತಿಯಿಂದ ಕೇಳುತ್ತಿದ್ದ ಅನ್ವರ್ “ಸುಭಾನಲ್ಲಾ!..ಅಲ್ಲಾ ಹುಕುಂ ಇದೇ ಆಗಿರುವಾಗ ನಾನ್ಯಾರು ಬೇಡವೆನ್ನಲು?..ನನಗೆ ಎಲ್ಲಾ ವಿಷಯವನ್ನು ಇನ್ನೂ ವಿವರವಾಗಿ ಹೇಳಿ..ಎಷ್ಟೊತ್ತಿಗೆ…ಎಲ್ಲಿ… ಎಂದು ಇತ್ಯಾದಿ..”ಎಂದು ಉತ್ಸಾಹದಿಂದ ಒಪ್ಪಿ, ಯಾರಿಗೂ ಈ ಗುಟ್ಟು ಬಿಟ್ಟುಕೊಡದ ಶಪಥವನ್ನೂ ಮಾಡಿ ಈ ಯೋಜನೆಗೆ ಸೇರ್ಪಡೆಯಾಗಿದ್ದನು…

ಪೆಟ್ರೋಲ್ ಬಂಕಿನ ನೌಕರನಾದ ಅಬೀದ್ ಸಹಾ “ಆ ಶಂಕರ್‌ನನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಸುಮ್ಮನಾಗಿಸುತ್ತೇನೆ, ಮೊದಲೇ ಕುಡುಕ, ಸದಾ ಸುಸ್ತಾಗಿರುತ್ತಾನೆ..ನೀವು ಸನ್ನೆ ಮಾಡಿ ಯಾವಾಗ ಅಂತಾ ಸಾಕು…ನಾನೂ ಅನ್ವರ್ ಜತೆಗಿದ್ದೇನೆ…” ಎಂದು ಧೈರ್ಯವಾಗಿ ಸಮ್ಮತಿಸಿದ್ದನು.

ನಾಲ್ಕನೆ ಗೇರಿನಲ್ಲಿ ಭರ್ತಿ ಟ್ಯಾಂಕರ್ ಲಾರಿಯನ್ನು ವೇಗಮಿತಿಯಲ್ಲೇ ಎಚ್ಚರಿಕೆಯಿಂದ ಪೆಟ್ರೋಲ್ ಬಂಕಿನತ್ತ ನೆಡೆಸಿದನು ಅನ್ವರ್..ಅವನಿಗೆ ಇನ್ನೂ ಬೇಕಾದಷ್ಟು ಸಮಯವಿತ್ತು..

ಧೃತಿ ಕಾರ್ ಓಡಿಸುತ್ತಾ ಭರತ್ ಬಗ್ಗೆಯೇ ಇನ್ನೂ ಯೋಚಿಸುತ್ತಿದ್ದಾಳೆ. ಇತ್ತೀಚೆಗೆ ಯಾಕೋ ತಮ್ಮಿಬ್ಬರ ಬದುಕು ಯಾಂತ್ರಿಕವಾಗಿ ನಿಸ್ಸಾರವಾಗುತ್ತಿದೆ ಎನಿಸುತ್ತಿದೆ. ಇಬ್ಬರೂ ಪ್ರೀತಿಸಿ ಮದುವೆಯಾಗಿ ಮೂರು ವರ್ಷಗಳಷ್ಟೇ ಆಗಿದೆ. ಮದುವೆಯಾದ ನಂತರ ಮಧುಚಂದ್ರಕ್ಕೆ ನಾಲ್ಕೇ ದಿನ ರಜದಲ್ಲಿ ಇಬ್ಬರೂ ಊಟಿಗೆ ಹೋಗಿದ್ದು ಬಿಟ್ಟರೆ ಪುನಃ ಅಂತಾ ಟ್ರಿಪ್ ಮಾಡಿದ್ದೇ ಇಲ್ಲ..ಎಲ್ಲಿ, ಹೊಸ ಬಾಡಿಗೆ ಮನೆ ಹಿಡಿದು, ತಾನೆರಡು ಬಾರಿ ನ್ಯೂಸ್ ಪೇಪರ್ ಲೋಕದ ಉದ್ಯೋಗ ಬಿಟ್ಟು ಟಿ.ವಿ. ಉದ್ಯಮಕ್ಕೆ ಸೇರಿ ಕೆಲಸದಲ್ಲಿ ಬೇರೂರಲು ಇದುವರೆಗೂ ಸಿಕ್ಕ ಸಮಯವೇ ಸಾಕೂ ಸಾಲದಾಗಿತ್ತು.. ಈ ಹಿಂದಿನ ಒಂದು ವರ್ಷದವರೆಗೂ ಭರತ್‍ಗೂ ಅಸ್ಸಾಮಿನಲ್ಲಿ ಡ್ಯೂಟಿ ಇದ್ದುದರಿಂದ, ಅಲ್ಲಿಂದ ಹೇಗೋ ವರ್ಗ ಮಾಡಿಸಿಕೊಂಡು ತನ್ನ ಜತೆ ಇದೇ ಊರಲು ನೆಲೆಸಲು ಬಂದಿದ್ದ. ಹೇಗೋ, ಬೇಗ ಎಲ್ಲಾದರೂ ಒಂದು ಸುಂದರ ಟ್ರಿಪ್ ಮಾಡಿಯೇ ಬಿಡಬೇಕು!

ಅವಳ ಯೋಚನಾ ಲಹರಿ ಕಟ್ ಆಗುವಂತೆ ಅಷ್ಟರಲ್ಲಿ ಮೊಬೈಲ್ ಫೋನ್ ರಿಂಗಣಿಸಿತು….ನೋಡಿದರೆ ತನ್ನ ಸಹೋದ್ಯೋಗಿ ಸವಿತಾ, ಆ ಸಮ್ಮೇಳನದ ಸ್ಪಾಟಿನಿಂದ..

“ಯಾವಾಗ ತಲುಪುತ್ತೀಯೇ ,ಧೃತಿ?..ಹತ್ತು ಗಂಟೆಗೆ ಮುಂಚೇನೇ ಬರ್ತೀ ತಾನೆ?..ಈಗೆಲ್ಲಿದೀಯಾ?” ಎಂದೆಲ್ಲ ಪ್ರಶ್ನೆಗಳ ಮಾಲೆ.

“ ಸವಿತಾ, ಬರ್ತೀನಮ್ಮಾ!…ಸ್ವಲ್ಪ ಕಾರಿಗೆ ಪೆಟ್ರೋಲ್ ಹಾಕಿಸಕ್ಕೆ ಹೊರಟು ಇವತ್ತು ಸ್ವಲ್ಪ ಸುತ್ತಾಯಿತು ಅಷ್ಟೇ….ಹಾಕಿಸಿಕೊಂಡು ತಕ್ಷಣ ಬಂದು ಬಿಡ್ತೀನಿ…” ಎಂದು ಫೋನಿಟ್ಟಳು..ಅವರೆಲ್ಲಾ ಇನ್ನೂ ಅನನುಭವಿಗಳು. ‘ಮೈನ್ ಇವೆಂಟ್ ಕವರ್ ಮಾಡಲು ತಾನು ತಲುಪದಿದ್ದರೆ ಎಂಬ ನಡುಕ ಅವರಿಗೆ ’ ಎನಿಸಿದಾಗ ಸ್ವಲ್ಪ ಜಂಬದ ಕಿರುನಗೆ ಮುಖದಲ್ಲಿ ಮಿಂಚಿತು.

ಪೆಟ್ರೋಲ್ ಲೆವೆಲ್ ನೋಡಿದರೆ ಕೊನೆ ಕಡ್ಡಿಯಲ್ಲಿ ಮಿನುಗುತ್ತಿದೆ..ಅಂದರೆ ಬಿಲ್ಕುಲ್ ಇಲ್ಲಾ!…ಸದ್ಯಾ, ಬಂಕ್ ಹತ್ತಿರ ಬರುತ್ತಿದೆ..ಇದು ಆ ಮಸೀದಿಯ ನೇರ ರೂಟಿನಲ್ಲೆ ಇದ್ದರೂ ಸ್ವಲ್ಪ ಹೊರಚಾದ ಪ್ರದೇಶ..ಇಲ್ಲಿ ಇದೊಂದೇ ಹತ್ತಿರ ಇರೋದು… ಹೇಗೋ ಪೆಟ್ರೋಲ್ ಸಿಕ್ಕರೆ ಸಾಕು!

ಆ ಬಂಕಿನ ದ್ವಾರದ ಬಳಿ ಬರುತ್ತಿದ್ದಂತೆಯೇ ಅವಳಿಗೆ ಒಂದು ದೈತ್ಯಾಕಾರದ ಪೆಟ್ರೋಲ್ ಟ್ಯಾಂಕರ್ ತನ್ನ ಹಾದಿಗೆ ಅಡ್ಡವಾಗಿ ನಿಂತಿದ್ದುದು ಕಂಡು ಬಂತು...‘ಛೇ, ಈಗ ಇನ್ನೂ ಲೇಟಾಗುವುದು, ಇವನು ಟ್ಯಾಂಕರ್ ಖಾಲಿ ಮಾಡಿ ಹೋಗುವವರೆಗೂ...’ ಎಂದು ಅವಳೇ ನಿಧಾನಕ್ಕೆ ಹಿಂದೆ ಕಾರನ್ನು ಸರಿಸಿ ಆ ಹಾದಿಯ ಬದಿಯಲ್ಲಿ ನಿಂತಳು.. ಆಕೆ ನಿಲ್ಲಿಸಿದ ಕಾರು ಟ್ಯಾಂಕರ್‌ನಿಂದ ಇಳಿದಿದ್ದ ಅನ್ವರ್ ಮತ್ತು ಅಬೀದರ ಕಣ್ಣಿಗೆ ಕಾಣದಂತಾ ಬ್ಲೈಂಡ್ ಸ್ಪಾಟ್ ಆಗಿದ್ದುದು ಕಾಕತಾಳೀಯ.

ಅವರು ಆಗ ಟ್ಯಾಂಕರಿನ ಮಗ್ಗುಲಿನಲ್ಲಿ ಶಂಕರ್ ಜತೆ ಆಗತಾನೆ ಬೇಟಿ ಮಾಡಿದ್ದರು.. ಶಂಕರ್ ಎದುರಿಗಿದ್ದ ಅನ್ವರನ್ನು ಉಭಯ ಕುಶಲೋಪರಿ ವಿಚಾರಿಸುತ್ತಿದ್ದಂತೆಯೇ, ಅಲ್ಲಿದ್ದ ಸ್ಟೀಲ್ ಕ್ರೋ ಬಾರ್ ತೆಗೆದುಕೊಂಡು ಅವನ ಹಿಂದೆಯೇ ಕಳ್ಳ ಹೆಜ್ಜೆಯಲ್ಲಿ ಬಂದಿದ್ದ ಅಬೀದ್ ಅವನ ತಲೆಯ ಹಿಂಭಾಗಕ್ಕೆ ಮಿಂಚಿನಂತೆ ಲಾಠಿಸಿದ್ದ...ಅವರ ಪ್ಲಾನ್ ಪ್ರಕಾರ ಆಗ ತಕ್ಷಣವೇ ಅನ್ವರ್ ಗಾಯಗೊಂಡ ಶಂಕರನ ಬಾಯನ್ನು ಒಡನೆಯೇ ತನ್ನ ಕೈಯಲ್ಲಿ ಮುಚ್ಚಿ ನೆಲಕ್ಕೆ ಬೀಳಿಸಿ ಸದ್ದು ಇಲ್ಲವಾಗಿಸಬೇಕಾಗಿತ್ತು..ಆದರೆ ವಿಧಿವಶಾತ್ ಅನ್ವರ್ ಒಂದು ಕ್ಷಣ ತಡಮಾಡಿಬಿಟ್ಟ..ಶಂಕರ್ ” ಅಮ್ಮಾ ...”ಎಂದು ನೋವಿನಿಂದ ಕಿರುಚಿಯೇ ಬಿಟ್ಟ, ಅನ್ವರ್ ಕೈ ಅವನ ದ್ವನಿಯನ್ನು ಉಡುಗಿಸವ ಮೊದಲೇ..

ಅವನ ಆರ್ತನಾದ ಮರೆಯಲ್ಲಿ ಕಾಯುತ್ತಿದ್ದ ಧೃತಿಯ ಕಿವಿಗೆ ಬಡಿದಿತ್ತು..ಅವಳು ಅರೆ ಕ್ಷಣ ತಬ್ಬಿಬ್ಬಾದಳು..ಈ ನಿರ್ಜನ ಬಂಕಿನಲ್ಲಿ ನೋವಿನ ಚೀತ್ಕಾರ? ಅವಳು ತಕ್ಷಣ ಜಾಗೃತಳಾಗಿ ಎಚ್ಚರಿಕೆಯಿಂದ ಬಂಕಿನ ಪಕ್ಕದಲ್ಲಿದ್ದ ಪೊದೆಗಳ ಬದಿಯಲ್ಲಿ ಸರಸರನೆ ಸಾಗಿ ನೋಡಬಂದಳು.. ತನ್ನ ಕಂಗಳನ್ನೇ ನಂಬಲಾಗುತ್ತಿಲ್ಲ..ಒಬ್ಬ ಬಂಕಿನ ಸಮವಸ್ತ್ರ ಧರಿಸಿದ ನೌಕರ ಮತ್ತು ಡ್ರೈವರ್ ದಿರುಸಿನವ, ಇನ್ನೊಬ್ಬ ಚೆನ್ನಾಗಿ ಗಾಯಗೊಂಡು ಒದ್ದಾಡುತ್ತಿರುವ ಒಬ್ಬ ನೌಕರನ ಬಾಯಿಗೆ ಬಟ್ಟೆ ತುರುಕಿ ಅವನು ಕಮಕ್ ಕಿಮಕ್ ಅನ್ನದಂತೆ ಬಲವಂತ ಮಾಡುತ್ತಿದ್ದಾರೆ. ಟ್ಯಾಂಕರಿನ ಡ್ರೈವರ್ ತನ್ನ ಬಳಿಯಿದ್ದ ನೈಲಾನ್ ಹಗ್ಗವನ್ನು ಇನ್ನೊಬ್ಬನಿಗೆ ನೀಡಿ,” ಬೇಗ ಕಟ್ಟು” ಎಂದು ಅವಸರಿಸಿದ್ದು ಮಂದವಾಗಿ ಕೇಳಿಸುತ್ತಿದೆ..ಅವರು ಕೆಳಗೆ ಬಿದ್ದಿದ್ದವನ ಕೈ ಕಾಲನ್ನು ನಿರ್ಧಯವಾಗಿ ಬಿಗಿಯಾಗಿ ಕಟ್ಟ ತೊಡಗಿದ್ದಾರೆ..ಧೃತಿಯ ಎದೆ ಆತಂಕದಿಂದ ಢವಗುಟ್ಟಿ, ಬಾಯಿ ಪಸೆ ಆರುತ್ತಿದೆ..ಸುತ್ತಲೂ ಕಣ್ಣು ಹಾಯಿಸಿದರೆ ಆ ಸ್ಥಳದಲ್ಲಿ ಅವಳನ್ನು ಬಿಟ್ಟು ಬೇರೆ ಯಾವ ಪ್ರತ್ಯಕ್ಷ ದರ್ಶಿಯೂ ಕಾಣುತ್ತಿಲ್ಲ...ಯಾರಿಗೆ ಹೇಳುವುದು, ಹೇಗೆ?..ತಾನೆ ನುಗ್ಗಿ ಅವರಿಬ್ಬರನ್ನೂ ಎದುರಿಸಿದರೆ...? ಎಂಬೆಲ್ಲ ಯೋಚನೆಗಳು ಅವಳ ತಲೆಯನ್ನು ಮುತ್ತಿಕೊಳ್ಳುತ್ತಿವೆ.

ಶಂಕರನ ಬಾಯಿಗೆ, ಕಣ್ಣಿಗೆ ಬಟ್ಟೆ ಕಟ್ಟಿ ಅವನ ಕೈ ಕಾಲು ಬಂಧಿಸಿ, ಅವನನ್ನು ದರದರನೆ ಪಕ್ಕದಲ್ಲಿದ ಗ್ಯಾರೇಜಿನಲ್ಲಿ ನೂಕಿ , ಶಟರ್ ಎಳೆದು ಮತ್ತೆ ಟ್ಯಾಂಕರಿನ ಬಳಿ ಬಂದರು.. ಆ ಸಂಧರ್ಭವನ್ನು ಬಳಸಿಕೊಂಡ ಧೃತಿ ಇನ್ನೂ ಹತ್ತಿರ ಬಂದು ಪೆಟ್ರೋಲ್ ಬಂಕಿನ ಪೊದೆಯ ಪಕ್ಕದ ಒಂದು ಕಂಬದ ಮರೆಯಲ್ಲಿ ನಿಂತು ಕಾಯುತ್ತಿದ್ದಾಳೆ, ಟ್ಯಾಂಕರಿನ ನಂಬರ್ ಪ್ಲೇಟ್ ನೋಟ್ ಮಾಡಿಕೊಳ್ಳುತ್ತಿದ್ದಾಳೆ...’ಇವರು ಏನು ಬಂಕಿನ ದರೋಡೆ ಮಾಡಹತ್ತಿದ್ದಾರೆಯೆ?’ ಎಂದು ಅವಳು ಚಿಂತಿಸುತ್ತಿದ್ದಾಳೆ...ಅನ್ವರ್ ಮತ್ತು ಅಬೀದ್ ತಮ್ಮ ಶ್ರಮದಿಂದ ಬೆವರು ಸುರಿಸುತ್ತಾ, ಏದುಸಿರು ಬಿಡುತ್ತಿದ್ದಾರೆ. ಅಬೀದ್ ಕೊಟ್ಟ ಪ್ಯಾಕೇಟ್ ಬಿಚ್ಚಿ ಪ್ಲಾಸ್ಟಿಕ್ ಮತ್ತು ಹಲವು ವೈರ್ಸ್ ಇರುವ ಬಾಂಬನ್ನು ಮೊದಲೇ ಕಾಸೀಂ ಭಾಯ್ ಹೇಳಿಕೊಟ್ಟ ರೀತಿಯಲ್ಲಿ ಮ್ಯಾಗ್ನೆಟ್ ಭಾಗವನ್ನು ಲಾರಿಯ ಚ್ಯಾಸಿಸ್‌ಗೆ ಪಟ್ಟೆಂದು ಕಣ್ಣಿಗೆ ಕಾಣದಂತೆ ಒತ್ತಿ ಬಚ್ಚಿಟ್ಟರು...”ತುಂಬಾ ಜೋರಾಗಿ ಓಡಿಸಬಾರ್ದಂತೆ, ಬಾಂಬ್ ಸ್ವಲ್ಪ ಅಲುಗಾಡಿದರೂ ರಸ್ತೆಯಲ್ಲೇ ಬರ್ಸ್ಟ್ ಆಗತ್ತಂತೆ..ಹಂಪ್ಸ್ ಹುಷಾರು..”ಎಂದು ಅವಶ್ಯಕತೆಗಿಂತ ಹೆಚ್ಚಿನ ದನಿಯಲ್ಲೇ ಅಬೀದ್ ಅನ್ವರಿಗೆ ಎಚ್ಚರಿಸಿದ..

ಉದ್ವಿಗ್ನನಾಗಿದ್ದ ಅನ್ವರ್ ಅವನ ಕೆನ್ನೆ ಗೆ ಬಾರಿಸಿ, ತಗ್ಗಿದ ಕುಪಿತ ದನಿಯಲ್ಲಿ, ” ಬಾಯ್ಮುಚ್ಚು, ಬೇವಕೂಫ್!..ಯಾರಿಗಾದರೂ ಕೇಳಿಸಿದರೆ?.. ಡ್ರೈವಿಂಗ್ ನನ್ನ ಕೆಲಸ, ಆ ಮಸೀದಿವರೆಗೂ ಜೋಪಾನವಾಗಿಟ್ಟಿರ್ತೀನಿ..ಅಲ್ಲೇ ನಾನು ಅದು ಎರಡೂ ಸಿಡಿಯುವುದು..ಸರಿ ಸರಿ, ನೀನೀಗ ಹೊರಡು, ಆ ಕ್ಯಾಷೆಲ್ಲಾ ಇಟ್ಟುಕೊಂಡು ರೈಲ್ ಹತ್ತಿ ಮರೆಯಾಗಿ ಬಿಡು..ಖುದಾ ಹಾಫೀಜ಼, ಕೊನೆಯ ಬಾರಿಗೆ..”ಎಂದು ಹೇಳಿ ಇಬ್ಬರು ಒಬ್ಬರನ್ನೊಬ್ಬರೂ ತಬ್ಬಿಕೊಂಡು ‘ಅಲ್ಲಾ ಹೋ ಅಕ್ಬರ್’ ಎಂದು ಹೇಳಿ ಬೇರೆಯಾದರು. ಈ ಗಳಿಗೆಯವರೆಗೂ ಅನ್ವರ್ ಮತ್ತು ಅಬೀದ್ ಇಬ್ಬರಿಗೂ ಧೃತಿ ತಮ್ಮನ್ನು ಕದ್ದು ನೋಡಿ ಎಲ್ಲಾ ಅರಿತುಬಿಟ್ಟಿದ್ದು ಗೊತ್ತಾಗಿರಲಿಲ್ಲ!..ಆದರೆ ಇಂತಾ ಆಘಾತಕರ ರಹಸ್ಯ ಸುದ್ದಿಯನ್ನು ಸ್ಪಷ್ಟವಾಗಿ ಕೇಳಿಬಿಟ್ಟಿದ್ದ ಧೃತಿ ಗಾಬರಿಯಿಂದ ಪೊದೆಯ ಬದಿಯಲ್ಲಿ ಜೋರಾಗಿ ಓಡಹತ್ತಿದಳು, ಯಾಕೆಂದರೆ ತನ್ನ ಕಾರಿನಲ್ಲಿ ಪೆಟೋಲ್ ಇಲ್ಲ.... ಅವಳಿಗೆ ತಾನೇನು ಮಾಡುತ್ತಿದ್ದೀನೆಂಬ ಅರಿವಾಗಲಿಲ್ಲ...ಮಸೀದಿ, ಬಾಂಬ್..ಮೈ ಗಾಡ್! ಅವಳಿಗೆ ಓಡುತ್ತಲೆ ತಲೆಯಲ್ಲಿ ಅವರ ಯೋಜನೆಯೆಲ್ಲಾ ಸ್ಪಷ್ಟವಾಗುತ್ತಿದೆ..ಇದು ಬರೇ ದರೊಡೆಯಲ್ಲಾ..ಅಯ್ಯೋ, ತನ್ನ ಪತಿ ಎಚ್ಚರದಿಂದ ಕಾಯುತ್ತಿರುವ, ತಾನು ವರದಿ ಮಾಡಲಿರುವ ಸಮ್ಮೇಳನವನ್ನು ಸರ್ವನಾಶ ಮಾಡುವ ಪಿತೂರಿ..

ಅವಳ ಓಟದ ಸದ್ದಿಗೆ, ಪೊದೆಯ ಅಲುಗಾಟಕ್ಕೆ ಎಚ್ಚರಗೊಂಡ ಅಬೀದ್ ಅವಳ ಹಿಂದೆಯೇ ಓಡಹತ್ತಿದ..ಅನ್ವರ್ ಅವನಿಗೆ “ಅವಳನ್ನು ಹಿಡಿದು ಮುಗಿಸು,...ಬಿಡಬೇಡಾ!” ಎನ್ನುತ್ತಿದ್ದಾನೆ..ಅವನ ಸಮಯ ಮೀರುತ್ತಿದೆ. ಅದೂ ಆಕೆ ತನ್ನ ದಿಕ್ಕಿಗೆ ವಿರುದ್ಧವಾಗಿ ಓಡುತ್ತಿದ್ದಾಳೆ!..ತಾನು ಫಾಲೋ ಮಾಡಲು ಈಗ ಸಮಯವಿಲ್ಲ..ತಾನು ಹೊರಟ ಕೆಲಸ ಮೊದಲು ಮುಗಿಸಬೇಕು ಎಂದರಿತ ಅನ್ವರ್ ಟ್ಯಾಂಕರ್ ಏರಿ ವೇಗವಾಗಿ ತನ್ನ ಅಂತಿಮ ಸವಾರಿ ಶುರು ಮಾಡಿಯೇ ಬಿಟ್ಟ...

ಅಬೀದ್ “ಏಯ್.. ನಿಲ್ಲೂಊ...!” ಎಂದು ಅರಚುತ್ತಾ ಒಡಿಬರುತ್ತಾ ಅವಳತ್ತ ಎರ್ರಾಬಿರ್ರಿಯಾಗಿ ತನ್ನ ಕ್ರೋಬಾರ್ ಎಸೆದನು..ಅವಳ ಅದೃಷ್ಟ ಚೆನ್ನಾಗಿತ್ತು , ಅವನ ಆಯುಧ ಗುರಿ ತಪ್ಪಿತ್ತು..ಏದುಸಿರು ಬಿಡುತ್ತಾ ಓಡುತ್ತಿದ್ದ ಧೃತಿಯ ಮನಸ್ಸಿನಲ್ಲಿ ಹೇಗಾದರೂ ಈ ಅನಾಹುತದ ಯೋಜನೆಯ ಸುದ್ದಿಯನ್ನು ತನ್ನ ಪತಿಗೆ ಮತ್ತು ಪೋಲಿಸರಿಗೆ ತಿಳಿಸಬೇಕೆಂಬ ತರಾತುರಿ..

ಮುಖ್ಯ ರಸ್ತೆಯ ಜಂಕ್ಷನಿಗೆ ಬಂದಾಗ ಧೃತಿ ಅಬೀದನನ್ನು ಜಯಿಸಿದಳು..ಅವಳ ಎದುರಿಗೆ ಖಾಲಿ ಟ್ಯಾಕ್ಸಿಯೊಂದು ಸರ್ರನೆ ಬಂದು ಬ್ರೇಕ್ ಹಾಕಿಕೊಂಡು ನಿಂತಿತು..ಅವಳ ಕಂಗಾಲಾದ ಮುಖ ಮತ್ತು ಹಿಂದೆಯೇ ಓಡಿ ಬರುತ್ತಿದ್ದ ಖದೀಮನನ್ನು ಕಂಡು ಟ್ಯಾಕ್ಸಿ ಡ್ರೈವರ್ ಇದೊಂದು ರೇಪ್ ಕೇಸಿನ ಯತ್ನ ಎಂದು ಊಹಿಸಿದನು.

ತಕ್ಷಣ ಡೋರ್ ಓಪನ್ ಮಾಡಿ, ಕಾರ್ ಚಾಲನೆಯಲ್ಲಿದ್ದಾಗಲೇ ಅವಳ ಕೈ ಹಿಡಿದು ಸುರಕ್ಷತೆಯ ಒಳಕ್ಕೆ ಸೆಳೆದಿದ್ದನು ಸಮಯಸ್ಪೂರ್ತಿ ತೋರಿಸಿದ ಡ್ರೈವರ್!..ಟ್ಯಾಕ್ಸಿಯಲ್ಲಿ ಧಸಕ್ ಎಂದು ಕೂತವಳೇ ತಕ್ಷಣ ತನ್ನ ಮೊಬೈಲ್ ಫೋನಿಂದ ಅನತಿ ದೂರದಲ್ಲಿ ಓಡಿ ಬರುತ್ತಿದ್ದ ಅಬೀದನ ಚಿತ್ರವನ್ನು ಕ್ಲಿಕ್ ಮಾಡಿಬಿಟ್ಟಳು.. ಮರುಕ್ಷಣವೇ ಟ್ಯಾಕ್ಸಿ ಅಬೀದನ ಎಲ್ಲೆಮೀರಿ ಸರ್ರನೆ ಸಾಗಿಹೋಗಿತ್ತು..ಮಿಂಚಿದ ಅವಕಾಶಕ್ಕೆ , ಅದರಿಂದಾಗುವ ಪರಿಣಾಮಕ್ಕೆ ಬೆದರಿದ ಅಬೀದ್ “ ಓಹ್...ಎಂದು ನಿರಾಶನಾಗಿ ಅರಚಿ, ದಿಕ್ಕು ಬದಲಿಸಿ ರೈಲ್ವೆ ಸ್ಟೇಷನ್ ಕಡೆಗೆ ಹುಚ್ಚನಂತೆ ಓಡಹತ್ತಿದ.

“ಏನಾಯಿತು ಮೇಡಮ್, ಈಗಿನ ಕಾಲದಲ್ಲಿ ರೇಪ್ ಎನ್ನುವುದು... “ಎಂದು ವ್ಯಾಖ್ಯಾನ ತೆಗೆದ ಡ್ರೈವರನ ಮಾತಿಗೆ ಕಿವಿಗೊಡಲು ಸಮಯವಿಲ್ಲ ಧೃತಿಗೆ. ಮನಸ್ಸನ್ನು ಸ್ಥಿಮಿತಕ್ಕೆ ತೆಗೆದುಕೊಂಡು “ ಡ್ರೈವರ್, ಷಿಯಾ ಮಸೀದಿಯ ಬಳಿಗೆ ಬೇಗ ನೆಡೆಸು” ಎಂದು ಅಪ್ಪಣೆ ಕೊಟ್ಟು ಭರತ್‌ನ ಮೊಬೈಲಿಗೆ ಕಾಲ್ ಮಾಡಲೆತ್ನಿಸಿದಳು.. “ಅದು ದೂರ, ವಿರುದ್ಧ ದಿಕ್ಕು, ಒನ್ ವೇ ಮೇಡಮ್” ಎನ್ನುತ್ತಿದ್ದಾನೆ ಸಂಚನ್ನು ಅರಿಯದ ಡ್ರೈವರ್.

ಅಯ್ಯೋ, ಇಲ್ಲಿ ನೆಟ್ವರ್ಕ್ ಸಿಗುತ್ತಿಲ್ಲ. ಸಿಗ್ನಲ್ಲೇ ಕಾಣುತ್ತಿಲ್ಲ! ...”ಡ್ರೈವರ್, ನಿನ್ನ ಮೊಬೈಲ್ ಕೊಡು” ಎಂದು ಅದನ್ನೂ ಕಿತ್ತುಕೊಂಡಳು ವಿಧಿಯಿಲ್ಲದೇ.. ಅದರಲ್ಲೂ ಕಾಲ್ ಹೋಗದೇ ಕಟ್ ಕಟ್ ಆಗುತ್ತಿದೆ, ತನ್ನ ಚಾನೆಲ್ಲಿನವರಿಗೂ ಈಗ ಲೈನ್ ಸಿಗುತ್ತಿಲ್ಲ ಛೇ!... ಆಗಾಗಲೇ ಡ್ರೈವರ್ ಸಂದಿಗೊಂದಿಗಳಲ್ಲಿ ತೂರುತ್ತಾ ಆ ಮಸೀದಿಯ ದಾರಿಯನ್ನು ಬೇಗ ಹಿಡಿಯಲು ಹರಸಾಹಸ ಮಾಡುತ್ತಿದ್ದಾನೆ.

ಭರತ್ ಸೇತುವೆಯ ಒಂದು ಬದಿಯಲ್ಲಿ ನಿಂತು ಈಗ ಸಲೀಸಾಗಿ ಚಲಿಸುತ್ತಿರುವ ವಾಹನಗಳನ್ನು ಕಂಡು ಒಂದು ನೆಮ್ಮದಿಯ ನಿಟ್ಟುಸಿರಿಟ್ಟನು...ಆಗಲೇ ಒಳಗಿನಿಂದ ದ್ವನಿವರ್ಧಕದಲ್ಲಿ ಕಾರ್ಯಕ್ರಮದಲ್ಲಿ ಮಾತಾಡುವವರ ದ್ವನಿ ಕೇಳಿಬರುತ್ತಿದೆ..ಅಬ್ಬಾ, ಕೊನೆಗೂ ಸರಿಯಾಗಿ ಸಭೆ ಶುರುವಾಯಿತು ಎಂದುಕೊಳ್ಳುತ್ತಿದ್ದವನಿಗೆ “ಬಜ್ಝ್ ಜ್!! “ಎಂದು ಮೊಬೈಲ್ ತನ್ನ ಜೇಬಿನಲ್ಲಿ ಜೀವಪಡೆದದ್ದು ಅರಿವಾಯಿತು. ಕೈಗೆ ತೆಗೆದುಕೊಂಡರೆ, ಯಾವುದೋ ತಿಳಿಯದ ನಂಬರ್..ಅರೆ ಮನಸ್ಸಿನಲ್ಲಿ ತೆಗೆಯಲೋ ಬೇಡವೋ ಎಂದು ಉತ್ತರಿಸಿದ.”ಹಲೋ!”

“ ಭರತ್, ನಾನು!..ಧೃತಿ ಹಿಯರ್..ನಾನು..”ಎಂದವಳು ಅವಸರವಾಗಿ ಶುರು ಮಾಡುತ್ತಿದ್ದಂತೆ, ಭರತ್ ಆಶ್ಚರ್ಯದಿಂದ , “ “ಇದೇನು, ಇದ್ಯಾವ ನಂಬರ್?..ನಿನ್ನದೇನಾಯ್ತು?..ಅಂದಹಾಗೆ ಇಲ್ಲಿ ನಿಮ್ಮ ಚಾನೆಲ್ಲಿನ ಸವಿತಾ ಕಾಯುತ್ತಿದ್ದಾಳೆ..”ಎಂದು ಮಾತು ತೆಗೆದನು.

ಧೃತಿ ಅವನನ್ನು ತಕ್ಷಣ ಕಟ್ ಮಾಡಿ “ಜಸ್ಟ್ ಲಿಸನ್,..ಈಗೊಂದು ಎಮರ್ಜೆನ್ಸಿಯಿದೆ ನಿನ್ನ ಬ್ರಿಡ್ಜಿನಲ್ಲಿ... ಒಂದು ಪೆಟ್ರೋಲ್ ಟ್ಯಾಂಕರ್ ಏನಾದರೂ ಬಂತೆ..?’ಎಂದು ಒತ್ತಿ ಕೇಳಿದಳು.

ಭರತ್ ಅಚ್ಚರಿಯಿಂದ ದನಿಯೇರಿಸಿ,” ಯಾವ ಟ್ಯಾಂಕರ್... ಏನಂತಾ ಎಮರ್ಜೆನ್ಸಿ?..ಆಗಿಂದ ಎಷ್ಟೋ ಟ್ಯಾಂಕರ್ ಬಂದು ಹೋಗಿವೆ...ವಾಟ್ ಡು ಯು...?” ಎಂದು ಪ್ರಶ್ನಿಸ ಹತ್ತಿದನು

“ನಾನೊಂದು ಬಾಂಬ್ ಇಟ್ಟ ಪೆಟ್ರೋಲ್ ಟ್ಯಾಂಕರ್ ನೋಡಿದೆ..ಅವರು ಅಲ್ಲಿಗೇ ಬಂದು ಮಸೀದಿ ಅಟ್ಯಾಕ್ ಮಾಡುತ್ತಾರೆ ಅಂತಾ ಮಾತಾಡಿಕೊಳ್ತಿದ್ರು...ನ್ಯಾಷನಲ್ ಆಯಿಲ್ ಕಂಪನೀದು..ನಂಬರ್ ಕೆ ಎ-೯೯ ಎಕ್ಸ್ ೮೮೮೮..ಜಸ್ಟ್ ಸ್ಟಾಪ್ ಇಟ್ ..ಬಾಂಬ್ ದಳದವರಿಗೆ ಹೇಳಿ ಚೆಕ್ ಮಾಡಿಸಿ...”..ಅವಳ ದನಿಯಲ್ಲಿದ್ದ ದೃಢತೆ ಮತ್ತು ವಿಶ್ವಾಸ ಅವನನ್ನು ಬೆರಗಾಗಿಸಿತು..ಧೃತಿ ಬಹಳ ಸ್ಮಾರ್ಟ್ ಯುವತಿ..ಟಿ.ವಿ.ಯ ಪ್ರಮುಖ ವರದಿಗಾರ್ತಿ... ತನ್ನ ಪತ್ನಿಯ ಜಾಣತನ ಮತ್ತು ಚುರುಕಿನ ಬಗ್ಗೆ ಅವನಿಗೆ ಮೊದಲಿನಿಂದಲೂ ಹೆಮ್ಮೆಯಿದೆ, ಅವಳು ಇಂತಾ ವಿಷಯಗಳಲ್ಲಿ ತಪ್ಪಿರಲಾರಳು..

ಅವನು ಚಕ್ಕನೇ ನಿಂತಲ್ಲೆ ನಿಂತ. ಮನಸ್ಸು ಚುರುಕಾಯಿತು... ಅವಳು ಹೇಳಿದ್ದನ್ನು ಆಲಿಸುತ್ತಿದ್ದಾನೆ...” ಪೆಟ್ರೋಲ್ ಟ್ಯಾಂಕರ್ರಾ?..”ಎಂದು ರಾಗವೆಳೆಯುತ್ತಾ ಬ್ರಿಡ್ಜ್ ಏರಿ ಮೇಲೆ ಬರುತ್ತಿರುವ ವಾಹನಗಳತ್ತ ಗಮನ ಹರಿಸಿದನು.

ಅಬ್ಬಾ, ಅದೋ..ಅಲ್ಲಿ ಬರುತ್ತಿದೆ ಅದೇ ಕಂಪನಿಯ ಟ್ಯಾಂಕರ್!..ಕಣ್ಣು ಕಿರಿದಾಗಿ ಅವಲೋಕಿಸಿತು..ಅದೇ ನಂಬರಿನ ಲಾರಿ!..ಅಂದರೆ...ನಮ್ಮ ಸೆಕ್ಯುರಿಟಿ ಚೆಕ್ ಪಾಯಿಂಟ್ ದಾಟಿ ಸಫಲವಾಗಿ ನುಗ್ಗಿಯೇ ಬಿಟ್ಟಿದೆ!.. ಬಾಂಬ್ ಏನಾದರೂ ಇದ್ದರೆ...!

ತನಗೂ ಆ ಟ್ಯಾಂಕರಿಗೂ ಮಧ್ಯೆ ಇನ್ನು ಎರಡೇ ನಿಮಿಷಗಳ ಅವಧಿಯಿದೆ...ತನಗೂ ಆ ವಾಹನದ ನಡುವೆ ಇನ್ಯಾರೂ ಇಲ್ಲ...

ಆ ಕ್ಷಣದಲ್ಲಿ ಭರತ್ ಒಂದು ಜೀವನ್ಮರಣದ ತೀರ್ಮಾನವನ್ನು ತೆಗೆದುಕೊಂಡುಬಿಟ್ಟ... ಐ ವಿಲ್ ಸ್ಟಾಪ್ ಇಟ್!..

ಎದೆ ಗಟ್ಟಿ ಮಾಡಿಕೊಂಡವನೇ ರಸ್ತೆಯ ನಡುವಿಗೆ ಆ ಟ್ಯಾಂಕರಿನ ಹಾದಿಯಲ್ಲಿ ಎದುರಿಗೆ ಬಂದು ನಿಂತು ಎರಡೂ ಕೈಯೆತ್ತಿ “ನಿಲ್ಲು ನಿಲ್ಲು “ಎಂದು ಸೂಚನೆ ನೀಡಲಾರಂಭಿಸಿದ...ನಿರಪರಾಧಿಯಾಗಿದ್ದರೆ ಅವನು ನಿಲ್ಲುತ್ತಾನೆ, ಇಲ್ಲದಿದ್ದರೆ ನಾನೇ ಆ ವಾಹನವನ್ನು ಏರುತ್ತೇನೆ! ಎಂದು ಕ್ಷಣಾರ್ಧದಲ್ಲಿ ನಿಶ್ಚಯಿಸಿಕೊಂಡ.. ನೋಡು ನೋಡುತ್ತಿದ್ದಂತೆಯೇ ಟ್ಯಾಂಕರ್ ಅದೇ ವೇಗದಿಂದ ನಿಲ್ಲುವ ಸುಳಿವೇ ಕೊಡದೇ ಮೃತ್ಯುರೂಪಿಯಾಗಿ ಹತ್ತಿರ ಓಡಿಬರುತ್ತಿದೆ!..ಅವನು ನಿಲ್ಲುವುದಿಲ್ಲ!. ಬಿಸಿಲ ಝಳದಲ್ಲಿ ಮಿಂಚಿದ ವಿಂಡ್ ಶೀಲ್ಡಿನಲ್ಲಿ ಗಾಬರಿಯಾಗಿದ್ದರೂ ವಿಚಲಿತನಾಗದೇ ತನ್ನತ್ತಲೇ ನುಗ್ಗುತ್ತಿದ್ದ ವಾಹನದ ಚಾಲಕ ಅನ್ವರನನ್ನು ಒಂದು ಕ್ಷಣ ಸ್ಪಷ್ಟವಾಗಿ ಕಂಡ. ಆ ಗಳಿಗೆಯೇ ಅವನಿಗೆ ತಿಳಿದುಹೋಯಿತು, ಇದೇ ಬಾಂಬ್ ಇರುವ ಟ್ಯಾಂಕರ್!..ಶೂಟ್ ಮಾಡಿ ಪ್ರಯೋಜನವಿಲ್ಲ, ತುಂಬಾ ತಡವಾಯಿತು..ತಾನೇ ಏರಿ ಅವನೊಂದಿಗೆ ಹೊಡೆದಾಡಬೇಕು ಎಂದುಕೊಂಡವನ ಅಪರಿಮಿತ ಸಾಹಸ ಪ್ರವೃತ್ತಿ ಮತ್ತು ತರಬೇತಿ ಆಗ ಕೆಲಸಕ್ಕೆ ಬಂತು... ತನ್ನ ಬದಿಗೆ ಬಂದ ಕ್ಷಣದಲ್ಲೇ ಟ್ಯಾಂಕರಿನ ಡ್ರೈವರ್ ಕ್ಯಾಬಿನ್ನಿನ ಬಾಗಿಲಿಗೆ ಎಗರಿ ಜೋತು ಬಿದ್ದ ಭರತ್. ಎರಡೂ ಕೈಗಳಿಂದ ನೇತಾಡುತ್ತಿದ್ದಾನೆ, ರಸ್ತೆಯ ಮೇಲೆ ಅವನ ಜೋತುಬಿದ್ದ ಕಾಲಿನ ಬೂಟ್ಸ್ ಪಾದಗಳು ಚರ್ರ್ರ್ ಎಂಬ ಒರಟು ಸದ್ದಿನೊಂದಿಗೆ ಸವೆಯುತ್ತಿವೆ..ಯಾವುದನ್ನೂ ಲೆಕ್ಕಿಸದೇ ಒಂದು ಕೈ ಒಳಹಾಕಿ ಬಾಗಿಲಿನ ಲ್ಯಾಚ್ ತೆಗೆದು ಮೇಲಕ್ಕೆ ಪುಟಿದು ನುಗ್ಗಿದ್ದನು ಭರತ್!..ಕೋಪ ಮತ್ತು ಭಯ ಎರಡೂ ಒಮ್ಮೆಲೇ ಆವರಿಸಿದ ಅನ್ವರ್ ದಾಳಿ ಮಾಡಿದ ಭರತ್‍ನನ್ನು ನೂಕುವ ಶತ ಪ್ರಯತ್ನ ಮಾಡಿದನು.. “ನನ್ನ ಗಾಡಿ ಬಿಟ್ಟು ಜಂಪ್ ಹೊಡೆದುಬಿಡು...ನಾನೂ ಸಾಯುತ್ತೇನೆ.... ನೀನೂ ಸಾಯುತ್ತೀಯಾ..”ಎಂದು ಎಚ್ಚರಿಸುತ್ತಾ ಅವನೊಂದಿಗೆ ಮುಷ್ಟಿಯುದ್ಧ ಆರಂಭಿಸಿದನು..ಭರತ್ ಸುಮ್ಮನೆ ಬಿಟ್ಟಾನೆಯೆ?..ಏಟಿಗೆ ಪ್ರತಿ ಏಟು ಕೊಡುತ್ತಾ ಟ್ಯಾಂಕರಿನ ಸ್ಟಿಯರಿಂಗನ್ನು ತನ್ನ ನಿಯಂತ್ರಣಕ್ಕಾಗಿ ಸೆಣೆಸುತ್ತಿದ್ದಾನೆ..ಈಗ ಆಯ ತಪ್ಪಿದ ವಾಹನ ಎರ್ರಾಬಿರ್ರಿಯಾಗಿ ಸಾಗುತ್ತಾ ಅಕ್ಕಪಕ್ಕದ ವಾಹನಗಳಿಗೆ ಡಿಕ್ಕಿಹೊಡೆಯುವಂತಿದೆ..

ಅಷ್ಟರಲ್ಲಿ ಟ್ಯಾಂಕರ್ ಆ ಮಸೀದಿಯ ಪಕ್ಕದಲ್ಲಿ ಹಾದು ಬ್ರಿಡ್ಜಿನಲ್ಲಿ ಮುಂದೆ ಹೋಗಿಬಿಟ್ಟಿತು!..

ತನ್ನ ಯೋಜನೆ ಸೋತುಹೋದುದನ್ನು ಹತಾಶನಾಗಿ ಗಮನಿಸಿದ ಅನ್ವರ್ ಗಾಡಿಯನ್ನು ಅತ್ತಕಡೆಗೆ ನುಗ್ಗಿಸಲಾಗದೇ ವಿಫಲನಾಗಿ,” “ಅರೇ, ಬದ್ಮಾಶ್...ನಿನ್ನಿಂದಲೇ!” ಎಂದು ಭರತ್ ಮೇಲೆ ರೋಷದಿಂದ ಹುಚ್ಚಾಪಟ್ಟೆ ಎರಗಿ ಗುದ್ದಲಾರಂಭಿಸಿದನು..

ಭರತ್ ಮತ್ತು ಅನ್ವರ್ ಗುದ್ದಾಟದಲ್ಲಿ ಗಾಡಿ ಹುಚ್ಚಾಪಟ್ಟೆ ಹಾವಿನಂತೆ ಎಲ್ಲೆಂದರಲ್ಲಿ ನುಗ್ಗುತ್ತಿದ್ದರಿಂದ ಎಚ್ಚೆತ್ತ ಭರತ್ ಆ ದಾಳಿಯ ನಡುವೆಯೂ ಟ್ಯಾಂಕರನ್ನು ಮಸೀದಿಯ ಎದುರಿನ ಭಾಗದಲ್ಲಿದ್ದ ‘ಮೆಳ್ಳಂದೂರು ಕೆರೆಗೆ ಬೀಳಿಸುವುದೊಂದೇ ಉಳಿದ ಮಾರ್ಗ’ ಎಂದರಿತನು..ಇಲ್ಲದಿದ್ದರೆ ತಮ್ಮ ಸೆಣೆಸಾಟದಲ್ಲಿ ಬಾಂಬ್ ಸ್ಪೋಟಿಸಿದರೆ, ಮಸೀದಿಯಲ್ಲದಿದ್ದರೂ ಸ್ವಲ್ಪವಾದರೂ ಹಾನಿ ಬ್ರಿಡ್ಜಿನ ಕೆಳಗೋ ಮೇಲೋ ಆಗೇ ಆದೀತು...ನೋ, ಆಗಕೂಡದು ಎಂದಿತು ಅವನ ಮನಸ್ಸಾಕ್ಷಿ!..ಭರತ್ ಅನ್ವರನ್ನು ಒಮ್ಮೆ ಶಕ್ತಿಯನ್ನೆಲ್ಲಾ ಬಿಟ್ಟು ತಳ್ಳಿ ಕೆರೆಯ ದಿಕ್ಕಿಗೆ ಬ್ರಿಡ್ಜಿನ ಅಂಚಿಗೆ ವಾಹನವನ್ನು ತಿರುಗಿಸಿಬಿಟ್ಟನು..ವಿಪರೀತ ಸ್ಪೀಡಿನಿಂದ ಅತ್ತ ನುಗ್ಗಿದ ಟ್ಯಾಂಕರ್ ಆ ಕಡೆಯ ಸ್ಟೀಲ್ ರೈಲಿಂಗ್ಸ್ ಮುರಿದುಕೊಂಡು ಧಡಮ್ಮನೆ ಹೊರಕ್ಕೆ ಗಾಳಿಯಲ್ಲಿ ಹಾರಿ ಚಿಮ್ಮಿತ್ತು!..ಗಾಬರಿಯಾದ ಜನ ನೋಡುತ್ತಿದ್ದಂತೆಯೇ ಕಿವಿಗಡಚಿಕ್ಕುವ ಎದೆನಡುಗಿಸುವ ಸ್ಪೋಟದಿಂದ ಟ್ಯಾಂಕರ್ ಕೆರೆಯ ನೀರಿನಾಳಕ್ಕೆ ಬಿದ್ದಿತ್ತು..ಆ ಸ್ಪೋಟಕ್ಕೆ ಪೆಟ್ರೋಲ್ ನೀರಿನ ಮೇಲೆ ಹರಡಿ ಧಗಧಗನೆ ಕೆರೆಯ ಮೇಲ್ಮೈಯೆಲ್ಲಾ ಲಾವಾರಸದಂತೆ ಜ್ವಲಂತವಾಯಿತು... ಆತ್ಮಾಹುತಿ ಮಾಡಿಕೊಳ್ಳಬೇಕೆಂದಿದ್ದವನೂ, ಪ್ರಾಣ ತ್ಯಾಗ ಮಾಡಲು ನಿರ್ಧರಿಸಿದವನೂ ಸೇರಿ ವಿಧಿಯ ವಿಪರ್ಯಾಸವೆಂಬಂತೆ ಒಟ್ಟಿಗೇ ಉರಿಯುವ ನೀರಿನ ಚಿತೆಯಲ್ಲಿ ಬೆಂದು ಹೋಗಿದ್ದರು..

ಆಗಾದ ಗೊಂದಲದಲ್ಲಿ ಎಲ್ಲರೂ ಸಮ್ಮೇಳನ ನಿಲ್ಲಿಸಿ ಹೊರಗೋಡಿ ಬಂದರು...ತಮ್ಮ ಪಾಲಿಗೆ ಬಂದೆರಗಲಿದ್ದ ಮೃತ್ಯುದೇವತೆಯನ್ನೂ ದಾರಿ ತಪ್ಪಿಸಿ ಈ ಅದ್ಭುತ ರೀತಿಯಲ್ಲಿ ಪ್ರಾಣತ್ಯಾಗ ಮಾಡಿ, ಅಪರಾಧಿಯನ್ನೂ ಕೊಂದವನು ಸಿ ಆರ್ ಪಿ ಎಫ್ ಕಮಾಂಡಂಟ್ ಭರತ್, ಭರತ್ ಎಂಬ ಮಾತು ಎಲ್ಲರ ತುಟಿಯಲ್ಲೂ ಆಡತೊಡಗಿತು..

ಕೆಲವೇ ನಿಮಿಷಗಳಲ್ಲಿ ಧೃತಿಯ ಟ್ಯಾಕ್ಸಿಯೂ ಕೆರೆಯಂಚಿನಲ್ಲಿ ಬಂದು ಗಕ್ಕನೆ ನಿಂತಿತು..ಅವಳು ಊಹಿಸಲೂ ಆಗದ ರೀತಿಯಲ್ಲಿ, ನಂಬಲೂ ಸಾಧ್ಯವಾಗದ ಬಗೆಯಲ್ಲಿ ಪತಿ ಭರತ್ ಹೆಗ್ಡೆ ತನ್ನ ಜೀವ ಕೊಟ್ಟು ಮಸೀದಿಯ ಮುಸ್ಲಿಂ ನೇತಾರರಿಗೆ ಅಪಮೃತ್ಯು ತಪ್ಪಿಸಿ ಪುನರ್ಜನ್ಮ ನೀಡಿದ್ದ. ಆ ಗಳಿಗೆಯಲ್ಲಿ ಆದ ಆಘಾತಕ್ಕೆ ಅವಳ ಮನಸ್ಸು ಮಿದುಳೂ ಬರಿದಾಗಿ ಹೋಗಿ ನಿರ್ಭಾವುಕಳಾಗಿ ಮೂಕಳಾಗಿ ಕುಳಿತೇ ಇದ್ದಳು...

ಟಿ.ವಿ.ಕ್ಯಾಮೆರಾದವನ ಜತೆಗೆ ಉದ್ವೇಗದಿಂದ ಅಲ್ಲಿಗೇ ಸಾಗಿ ಬಂದ ಸಹೋದ್ಯೋಗಿ ಸವಿತಾ, ಧೃತಿ ಪಕ್ಕ ನಿಂತು ತೋರಿಸುತ್ತಾ, ಘಟನೆಯ ವರದಿ ಮಾಡಹತ್ತಿದಳು “ ಹೆಸರಿಗೆ ತಕ್ಕಂತಾ ನಮ್ಮ ಪ್ರಮುಖ ವರದಿಗಾರ್ತಿ ಧೃತಿ ಇಂದು ಯಾವ ಪತ್ನಿಯೂ ಮಾಡಲಿಚ್ಚಿಸದ, ಯಾವ ದೇಶ ಪ್ರೇಮಿಯು ಮಾಡದೇ ಉಳಿಯದ ಅಪೂರ್ವ ಕಾರ್ಯವನ್ನು ಮಾಡಿದ್ದಾಳೆ... ಆಕೆಯ ಪತಿ ಕಮಾಂಡಂಟ್ ಭರತ್ ಹೆಗ್ಡೆ ಕರ್ತವ್ಯವೇ ದೇವರು ಎಂದು ಭಾವಿಸಿ ಇಂದು ಭಯೋತ್ಪಾದಕನೊಂದಿಗೆ ಹೋರಾಡಿ ವೀರ ಮರಣ ಹೊಂದಿದ್ದಾರೆ..ವಿನಾಶಕಾರಿ ದ್ವೇಷದ ಸ್ಪೋಟವನ್ನು ಶಾಂತಗೊಳಿಸಿದ್ದಾರೆ...”ಎನ್ನುತ್ತಿದ್ದಂತೆಯೇ, ತಟಕ್ಕನೇ ಪುನರ್ಜೀವ ಬಂದವಳಂತೆ ಧೃತಿ ಎದ್ದು ನಿಂತು ಸವಿತಾಳ ಮೈಕ್ ತಾನು ತೆಗೆದುಕೊಂಡಳು ...

“ ಸ್ಪೋಟವನ್ನು ಶಾಂತಗೊಳಿಸುದುದಲ್ಲ...ನನ್ನ ಪತಿ ಶಾಂತಿಯನ್ನೇ ಸ್ಪೋಟಿಸಿ ಜಗತ್ತಿಗೆಲ್ಲಾ ಹರಡಿ ಹೋಗಿದ್ದಾರೆ..”.ಎಂದು ಬಿಕ್ಕಿದಳು... ” ಸಾರಿ, ವೀಕ್ಷಕರೆ, ಇನ್ನು ನನಗೆ ಅಳಲು ಬಿಡಿ!” ಎಂದು ಕ್ಯಾಮೆರಾದಿಂದ ದೂರವಾಗುತ್ತಾ ಭೋರ್ಗರೆದು ರೋಧಿಸಹತ್ತಿದಳು..

ಅಲ್ಲಿಗೆ ಓಡಿ ಬಂದು ನಿಂತ ಷಿಯಾ ಸಮುದಾಯದ ಮಹನೀಯರ ಕಂಗಳು ತೇವವಾಗಿತ್ತು..ಕಂಠ ಗದ್ಗದಿತವಾಗಿತ್ತು..ಅವರು ನುಡಿಯುತ್ತಿದ್ದರು:

“ಶಾಂತಿಯನ್ನು ಬಯಸಿ ಬಂದವರು ನಾವು..ಆದರೆ ಅಶಾಂತಿ ಮತ್ತು ದಮನದ ಕಿಚ್ಚು ಹೊತ್ತು ಬಂದವರು ನಮ್ಮ ಇಸ್ಲಾಂ ಧರ್ಮದ ದಾರಿತಪ್ಪಿದ ಅನುಯಾಯಿಗಳು...ಇದನ್ನೆಲ್ಲಾ ಮೀರಿ ನಿಂತು ನಮ್ಮ ಪ್ರಾಣಕ್ಕೆ ತನ್ನ ಪ್ರಾಣದ ಪಣವೊಡ್ಡಲು ಒಬ್ಬ ಹಿಂದೂ ಮುಂದಾದ.. ನೂರು ಜನರನ್ನು ಬಲಿ ಕೊಡಲು ಪ್ರಾಣ ತ್ಯಾಗ ಮಾಡುವುದಲ್ಲ, ನೂರು ಜನರ ಜೀವ ಉಳಿಸಲು ಮಾಡುವ ಪ್ರಾಣ ತ್ಯಾಗ, ಅದುವೇ ಉದಾತ್ತ!....ಹೌದು, ಭರತ್ ಹೆಗ್ಡೆಯವರಂತ ಧೀಮಂತ ತ್ಯಾಗಿಯ ಸಂದೇಶವಿಂದು ದೇಶ ವಿದೇಶದ ಉದ್ದಗಲಕ್ಕೂ ಹರಡಿ ಜಾಗತಿಕ ಶಾಂತಿ ಸೌಹಾರ್ದ ಮತ್ತು ಸಹಜೀವನದ ಪಾಠ ಕಲಿಸಲಿದೆ..” ಹೀಗೆ ಉದ್ದುದ್ದವಾಗಿ ಆ ಉತ್ತಮ ವಾಗ್ಮಿಗಳ ಹೇಳಿಕೆ ಟಿ ವಿ ಯಲ್ಲಿ ಪ್ರಸಾರವಾಗುತಿತ್ತು...

‘ಇವರು ಸಂದೇಶದ ಬಗ್ಗೆ ಯೋಜಿಸುತ್ತಿದ್ದರೆ, ನನ್ನ ಪತಿ ದೇಶದ ಬಗ್ಗೆ ಯೋಚಿಸುತ್ತಿದ್ದರು’ ಎಂದುಕೊಂಡು ಬಿಕ್ಕಿ ನಿಟ್ಟುಸಿರಿಟ್ಟು ಎದ್ದಳು ಧೃತಿ..ಇನ್ನೂ ಒಂದು ಕರ್ತವ್ಯ ಅವಳಿಗೆ ಬಾಕಿಯಿತ್ತು..ತನ್ನನ್ನು ಬೆನ್ನಟ್ಟಿದ್ದ ಪಾತಕಿಯ ಚಹರೆಯ ಚಿತ್ರವನ್ನು ಪೋಲಿಸರಿಗೆ ತಲುಪಿಸಿ ಅವನ ಬಂಧನಕ್ಕೆ ಕಾರಣವಾಗುವುದು! ..

ಮೆಳ್ಳಂದೂರು ಕೆರೆ ತನ್ನೊಡಲಲ್ಲಿ ದೇಶ ಭಕ್ತ ಮತ್ತು ದೇಶ ದ್ರೋಹಿಗಳಿಬ್ಬರನ್ನೂ ಒಟ್ಟಿಗೇ ನುಂಗಿದಕ್ಕೆ ತನಗೇ ನಾಚಿಕೆಯಾದಂತೆ ಸ್ಪೋಟಿಸಿದ ಜ್ವಾಲೆಗಳನ್ನು ತಣ್ಣಗಾಗಿಸಿ ಶೋಕದ ಹೊಗೆಯನ್ನು ಮಾತ್ರವೇ ಚೆಲ್ಲುತ್ತಿದ್ದಂತಿತ್ತು .


( ಮುಗಿಯಿತು)


 
 
 

Comments


© 2020 by Nagesh Kumar CS . Proudly created with Wix.com

bottom of page