ಕನ್ನಡ ಪುಸ್ತಕ ಮುದ್ರಣ, ಹಂಚಿಕೆ ಮತ್ತು ಮಾರಾಟ- ಉಪಯುಕ್ತ ಮಾಹಿತಿ: ~~~~~~~~~~~~~~~~~~~~~~~~~~~~~~~~~~~~~~~~~~~~~~~~~ ಕನ್ನಡ ಪುಸ್ತಕಗಳನ್ನು ಪ್ರಕಾಶಿಸಲು, ಹಂಚಲು, ಸಂಭಾವನೆ ಪಡೆಯಲು ನಾನು ಇತ್ತೀಚೆಗೆ ಅನುಭವಿಸಿದರ ಆಧಾರದ ಮೇಲೆ ಕೆಳಕಂಡ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇನೆ...ಕೆಲವರ ಅನುಭವ ಇದಕ್ಕಿಂತಾ ವ್ಯತ್ಯಾಸವಾಗಿದ್ದರೂ ಇರಬಹುದು, ಗೊತ್ತಿಲ್ಲ. ಹಲವರು ನನಗೆ ಇ ಮೇಲ್ ಮತ್ತು ಇನ್ ಬಾಕ್ಸ್ ನಲ್ಲಿ ಕೇಳಿದ ಪ್ರಶ್ನೆಗಳನ್ನು ಕಂಡು ಈ ಒಂದು ಲೇಖನ. ಪ್ರಕಾಶನ: 1. ನಾನು ಮೊದಲೇ (ಆಗಲೇ) ಹೇಳಿರುವ ಸೆಲ್ಫ್ ಪಬ್ಲಿಶಿಂಗ್ ಎಲೆಕ್ಟ್ರಾನಿಕ್ ಮಾಧ್ಯಮಗಳಾದ ಪ್ರಿಂಟ್ ಆನ್ ಡಿಮ್ಯಾಂಡ್ - ಪೋತಿ.ಕಾಂ ವ್ಯವಸ್ಥೆಯ ಬಗ್ಗೆ ಪ್ರತ್ಯೇಕ ಲೇಖನ ಇದೆ, ಓದಿ ನೋಡಿ 2.ಸಾಧಾರಣವಾಗಿ ಯಾವುದೇ ಕನ್ನಡ ಪುಸ್ತಕ ಪ್ರಕಾಶಕರ ಬಳಿ ಹೋಗುವ ಮುನ್ನ ನಿಮ್ಮ ಲೇಖನದ ಕರಡು ಪ್ರತಿಯನ್ನು ಸಾಫ್ಟ್ ಕಾಪಿ- ವರ್ಡ್, ಆರ್ ಟಿ ಎಫ್ ಫೈಲ್ ನಲ್ಲಿ ಸೇವ್ ಮಾಡಿಕೊಳ್ಳಿ..ಮೊದಲಿನ ತರಹ ಕೈಬರಹವನ್ನು ಆಧರಿಸಿ ಮುದ್ರಿಸುವ ಕ್ರಮ ನನಗೆ ತಿಳಿದ ಪ್ರಕಾರ ಅತ್ಯಂತ ಕಡಿಮೆ. 3, ಮುಕ್ಕಾಲು ಪಾಲು ಪ್ರಕಾಶಕರು ಯೂನಿಕೋಡ್ ಕನ್ನಡ ಬಳಸುತ್ತಿಲ್ಲ...ನುಡಿ/ ಬರಹ (ಆಸ್ಕಿ) 10 -12 ಸೈಜಿನ ಫಾಂಟುಗಳಲ್ಲಿರಲಿ. ಯೂನಿಕೋಡ್ ಇದ್ದರೆ ಅದನ್ನು ಪರಿವರ್ತಿಸಿಕೊಳ್ಳಿ. 4.ಅವರಿಗೆ ನೀವು ಸಾಫ್ಟ್ ಕಾಪಿ ಕೊಟ್ಟ ಸಮಯಕ್ಕೆ ಒಂದು ಒಪ್ಪಂದವಾಗುತ್ತದೆ. ಮೊದಲ ಮುದ್ರಣ 1 ಸಾವಿರ ಪ್ರತಿಗಳೆಂದೂ ಇಷ್ಟು ಸಮಯದಲ್ಲಿ ಪ್ರಕಟಿಸುತ್ತೇವೆಂದು. ಲಿಖಿತ ಇಲ್ಲ, ಬರೇ ಮೌಕಿಕ!. ಅವರು ನಿಮ್ಮ ಬಳಿ ಯಾವುದೇ ಹಣ ಪಡೆಯುವುದಿಲ್ಲ, ಕೊಡುವುದೂ ಇಲ್ಲ (ಸಾಮಾನ್ಯವಾಗಿ). 5.ಪುಸ್ತಕ ಮುದ್ರಿತವಾಗುವ ಮುನ್ನ ಅವರು ಡಿ ಟಿ ಪಿ ಆವೃತ್ತಿಯಲ್ಲಿ ತಯಾರಿಸಿ ಲೇಖಕರಿಗೆ ತೋರಿಸುತ್ತಾರೆ. ಮುಖಪುಟವನ್ನು ನೀವಿಬ್ಬರೂ ಒಪ್ಪಿ ಇಲ್ಲವೇ ಅವರೇ ನಿರ್ಧರಿಸಿ ಒಬ್ಬ ಕಲಾವಿದನ ಕೈಯಲ್ಲಿ ಮಾಡಿಸಿರುತ್ತಾರೆ. ನಿಮ್ಮ ಸಲಹೆ/ ಬದಲಾವಣೆ/ ಟೀಕೆ ಏನಿದ್ದರೂ ಮುದ್ರಣದ ಮೊದಲು ಮಾತ್ರ. ಅವರೇ ಸ್ಪೆಲ್ ಚೆಕ್ ಮಾಡುತ್ತಾರೆ, ಆದರೆ ನಿಧಾನವಾಗಿ ನೀವೇ ಒಮ್ಮೆ ಒಂದೊಂದು ವಾಕ್ಯವನ್ನೂ, ವ್ಯಾಕರಣ ಬದ್ಧವಾಗಿ ಚೆಕ್ ಮಾಡುವುದು ಒಳ್ಳೆಯದು..,ಹೌದು ಕನ್ನಡ ವ್ಯಾಕರಣ ವನ್ನು ಮತ್ತೆ ಅಭ್ಯಾಸ ಮಾಡಿ ರಿಫ್ರೆಶ್ ಮಾಡಿಕೊಳ್ಳಿ, ಅವಮಾನವೇನಿಲ್ಲ! 6. ಅದರಲ್ಲಿಯೂ ಅಧ್ಯಾಯಗಳ ಬ್ರೇಕ್, ಮುಂದಿನ ಪುಟಕ್ಕೆ ಹಾರುವುದು, ಹೆಡ್ಡಿಂಗ್ ಸೈಜು, ಸಂಖ್ಯೆ, ಮಧ್ಯೆ ಮಧ್ಯೆ ಆಂಗ್ಲ ಭಾಷೆಯ ಪದಗಳೇನಾದ್ರೂ ಇದ್ದರೆ ಸರಿಯಾಗಿ ಬಂದಿದೆಯೇ ಎಂದು ನೋಡಿ ( ನುಡಿ ಕನ್ನಡ ಅದನ್ನು ಹಾಳು ಮಾಡಿರುತ್ತದೆ....ನನ್ನ ಪ್ರಕಾರ ಅದು ಕೆಟ್ಟ ಸಾಫ್ಟ್ ವೇರ್...‘ಬರಹ’ ವೇ ವಾಸಿ...ಇರಲಿ ಅದು ನನ್ನ ವೈಯಕ್ತಿಕ ಅಭಿಪ್ರಾಯ). ಅದಕ್ಕೆಲ್ಲಾ ವರ್ಡ್ ಡಾಕ್ಯುಮೆಂಟಿನಲ್ಲೇ ವ್ಯವಸ್ಥೆ ಇದೆ, (ಕನ್ನಡ ಸ್ಪೆಲ್ ಚೆಕ್ ಬಿಟ್ಟು), ಅವನ್ನು ಪ್ರ್ಯಾಕ್ಟೀಸ್ ಮಾಡಿ. " ಮತ್ತು "( ಕೋಟ್ಸ್), ( ಕಾಮ್ಮ) , .( ಫ಼ುಲ್ ಸ್ಟಾಪ್) ಮತ್ತು ಪ್ಯಾರಾಗ್ರಾಫುಗಳ ವಿಂಗಡನೆ, ಲೈನ್ ಸ್ಪೇಸ್, ಅದರ ನಡುವಿನ ಅಂತರ - ಇವನ್ನು ಬಹಳ ಎಚ್ಚರಿಕೆಯಿಂದ ಚೆಕ್ ಮಾಡಿ...ಇದಕ್ಕೇ ಸರಿಯಾದ ಫಾರ್ಮ್ಯಾಟಿಂಗ್ ಎನ್ನುತ್ತಾರೆ. 7. ಕೆಳಕಂಡ ಕೊಂಡಿಯನ್ನು ನೋಡಿ ಅಭ್ಯಾಸಮಾಡಿ...ಉತ್ತಮ ಟಿಪ್ಸ್ ಇವೆ... https://forums.createspace.com/en/community/docs/DOC-1482 ನಾನು ಮೇಲೆ ಹೇಳಿದ ಈ ಪಾಯಿಂಟುಗಳೇ ಮುಖ್ಯ:- ನೀವೆಷ್ಟು ಕಸುಬುದಾರಿ -ಪ್ರೊಫೆಶನಲ್ ಅಥವಾ ಹೊಸಬ/ ಅಮೆಚೂರ್ ಎಂದು ನಿರ್ಧರಿಸಲು. ಮುದ್ರಿತ ಪುಸ್ತಕದಲ್ಲಿ ತಪ್ಪುಗಳಿದ್ದರೆ ಓದುಗರಿಗೆ ಅದರ ಗುಣಮಟ್ಟ ಕಡಿಮೆ ಎನಿಸಬಹುದು. 8. ಪುಸ್ತಕಕ್ಕೆ ಮುನ್ನುಡಿ/ ಬೆನ್ನುಡಿಯನ್ನು ನೀವೇ ಬರೆಯಬಹುದು ಇಲ್ಲವೇ ನಿಮ್ಮ ಪರಿಚಯದ ಹಿರಿಯ ಸಾಹಿತಿಯಿಂದ ಬರೆಸಿ ಮುದ್ರಿಸಿದರೆ ಅದರ ಪ್ರಾಮುಖ್ಯತೆ / ಬೆಲೆ/ ಗೌರವ ಹೆಚ್ಚು. ಅದನ್ನು ಪ್ರಕಾಶಕರೂ ನೀವೂ ಸೇರಿ ನಿರ್ಧರಿಸಬೇಕು. ಅಂತವರಿಗೆ ನಮ್ಮ ಪುಸ್ತಕದ ಡ್ರಾಫ಼್ಟ್ ಕೊಟ್ಟು ಅವರ ಕೈಲಿ ಓದಿಸಿ ಬರೆಸಿಕೊಳ್ಳಿ ಸಂಭಾವನೆ/ ಹಣ: 1.ಒಪ್ಪಂದದ ಪ್ರಕಾರ ನಿಮಗೆ ಪುಸ್ತಕಗಳು ( 1000 ಆದರೆ 150-200, ಇತ್ಯಾದಿ) ನಿಮಗೆ ಕೊಟ್ಟುಬಿಡುತ್ತಾರೆ. ಅದನ್ನು ಮಾರಿ ನೀವು ಸಂಭಾವನೆ ಸಂಪಾದಿಸಿಕೊಳ್ಳಬೇಕು. ಹಣದ ರೂಪದಲ್ಲಿ ಅವರು ಸಂಭಾವನೆ ನೀಡುವುದು ಅಪರೂಪ. ನೀವೇ ನಿಮ್ಮ ಪುಸ್ತಕಗಳನ್ನು ಮಾರಿ ಪಡೆದುಕೊಳ್ಳಬೇಕು 2. ಇನ್ನು ಅವರ ಪ್ರತಿಗಳನ್ನು ರಾಜ್ಯ ಗ್ರಂಥಾಲಯ ಇಲಾಖೆಗೆ ಹೆಚ್ಚು ಮಾರುತ್ತಾರೆ, ಅದು ಅವರಿಬ್ಬರ ಒಪ್ಪಂದದ ಪ್ರಕಾರ. ಲೇಖಕರಿಗೆ ಸಂಬಂಧವಿಲ್ಲ .ಕೆಲವು ಮುಖ್ಯ ಅಂಗಡಿಯವರಿಗೂ ನಿಯಮಿತ ಪ್ರತಿಗಳನ್ನು ಮಾರುತ್ತಾರೆ. ಅದೆಲ್ಲಾ ಅವರ ಸಂಪಾದನೆ. 3. ಲೇಖಕನಿಗೆ ಪ್ರಕಾಶಕನು ಕೊಟ್ಟ 150 -200 ಪುಸ್ತಕಗಳನ್ನು ಅವನೇ ಮಾರಬೇಕು. ನಿಮಗೆ ತಿಳಿದವರಿಗೆ ಉಚಿತ ಕಾಪಿ ಕೊಟ್ಟ(ರೆ) ನಂತರ. ಸಾಧಾರಣವಾಗಿ ಒಂದರ ಬೆಲೆ ರೂ. 100- 200 ದಾಟುವುದಿಲ್ಲ. ಅದಕ್ಕಿಂತಾ ಬೆಲೆಯಿದ್ದರೆ ಮಾರುವುದು ಕಷ್ಟ. ನೀವೇ ದುಡ್ಡು ಹಾಕಿ ಸ್ವಂತ ಪ್ರಕಾಶ ಮಾಡಿದ್ದರೆ ಎಲ್ಲವೂ ನಿಮ್ಮದೇ ಜವಾಬ್ದಾರಿ.
ಹಂಚಿಕೆ/ ಮಾರಾಟ: ನಿಮಗೆ ತಿಳಿದ ಪ್ರಸಿದ್ಧ/ ಸಾಧಾರಣ ಕನ್ನಡ ಪುಸ್ತಕದಂಗಡಿಗಳಲ್ಲಿ ಖುದ್ದಾಗಿ ಭೇಟಿ ಮಾಡಿ ಅವರಿಗೆ ನಿಮ್ಮ ಪುಸ್ತಕದ ಪ್ರತಿಗಳನ್ನು ಮಾರಿಸಲು ಕೇಳಿ. ಅಬ್ಬಬ್ಬ ಎಂದರೆ 5- 10 ಪ್ರತಿಗಳನ್ನು ಮೊದಲು ತೆಗೆದುಕೊಳ್ಳುತ್ತಾರೆ ಅಷ್ಟೇ..ಏಕೆಂದರೆ ಕನ್ನಡ ಪುಸ್ತಕಗಳಿರುವ ( ಹೊಸಬರ) ಮಾರ್ಕೇಟ್ ಅಷ್ಟು ಚಿಕ್ಕದು. ಅವನ್ನು ಮಾರಿದ ನಂತರ 5 ಅಥವಾ 10 ಕ್ಕೆ ಸೇರಿಸಿ ನೀವು ಹೇಳಿದ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಾರೆ. ಚೆಕ್/ ಆನ್ ಲೈನ್ ಇತ್ಯಾದಿ. ಅವೆಲ್ಲಾ ಖರ್ಚಾಗಿ ಇನ್ನೂ ಡಿಮ್ಯಾಂಡ್ ಇದ್ದರೆ ಮತ್ತೆ ನಿಮ್ಮನ್ನು ಕೇಳುತ್ತಾರೆ, ಇಲ್ಲವಾದರೆ ಇಲ್ಲ! (ಸಪ್ನಾದವರಿಗೆ ನಾನು ನನ ಎರಡು ಪುಸ್ತಕಗಳೆಲ್ಲಾ ಪ್ರಸಿದ್ಧ ಪತ್ರಿಕೆಗಳಾದ ಸುಧಾ, ತರಂಗ, ಕರ್ಮವೀರ ಇತ್ಯಾದಿಯಲ್ಲಿ ಪ್ರಕಟವಾಗಿ ಈ ಎಲ್ಲವೂ ಇ ಪುಸ್ತಕವಾಗಿಯೂ ಜನಪ್ರಿಯವಾಗಿದೆ ಎಂದ ಮೇಲೆ 25 ಕಾಪಿಗಳನ್ನು ತೆಗೆದುಕೊಂಡರು. ಮಿಕ್ಕವರು ಹಾಗೂ 5-10 ಕಾಪಿ ಮಾತ್ರ ತೆಗೆದುಕೊಂಡರು ಮಾರಲು. ಇನ್ನು ನೀವೇ ಲೆಕ್ಕ ಹಾಕಿಕೊಳ್ಳಿ-ಕನ್ನಡ ಓದುಗರ ಬೇಡಿಕೆ ಎಷ್ಟಿದೆ ಎಂದು) ..(ಇನ್ನೂ ನಮ್ಮ ಜನರು ಸಾಯಿಸುತೆ, ಉಷಾ ನವರತ್ನ ರಾಂ, ರವಿ ಬೆಳೆಗೆರೆ, ಟಿ ಕೆ ರಾಮರಾವ್, ವಾಣಿ, ಎಂ ಕೆ ಇಂದಿರಾ, ಪೂ ಚಂ ತೇ ಇಂತಾ ಹಳಬರ ಪ್ರಸಿದ್ಧರ ಕಾದಂಬರಿಗಳನ್ನೇ ಕೇಳುತ್ತಾರಂತೆ; ಅದೂ ಆ ಕಾಲದ ಓದುಗರು...ಇನ್ನು ಹೊಸಬರ ಪಾಡೇನು? ಇನ್ನು ಬಹುಪಾಲು ಯುವ ಜನತೆಗೆ ಕನ್ನಡ ಪುಸ್ತಕಗಳೇ ಬೇಡ, ಇಂಗ್ಲೀಶ್ ನಾವೆಲ್ಸ್ ಮಾತ್ರ ಬೇಕು.. ಹೀಗಿದೆ ವಸ್ತು ಸ್ಥಿತಿ ಎಂದು ಎಲ್ಲರೂ ನನಗೆ ಹೇಳಿದರು). (ಈಗ ನಿಮಗೆ ಅರ್ಥವಾಗಬಹುದು... ಕೆಲವರು ಪುಸ್ತಕವನ್ನು ಸ್ಕ್ಯಾನ್-ಪಿ ಡಿ ಎಫ್ ಮಾಡಿಕೊಡಿ ಓದುತ್ತೇವೆ ಎನ್ನುತ್ತಾರಲ್ಲ, ಇದರ ಪರಿಣಾಮವೇನು ಎಂದು!) ಇದು ನನ್ನ ಸ್ವಾನುಭವ.
Commentaires