top of page

ಆಸ್ಪತ್ರೆ ಎಂಬ ಮಹಾಸಾಗರ

Writer's picture: Nagesh KumarNagesh Kumar

ಅಮ್ಮ ವಯಸ್ಸಾಗಿ ಈಗೀಗ ಆಸ್ಪತ್ರೆ ವಾಸಿಯಾಗುತ್ತಿದ್ದಾರೆ. ನಮಗಾಗಲೇ ಎರಡು ಮೂರು ಸಲ ಬಿ ಜಿ ಎಸ್ ಆಸ್ಪತ್ರೆ ಮತ್ತು ಫ಼ೋರ್ಟಿಸ್ ನಾಗರಬಾವಿಯ ಪರಿಚಯ ಚೆನ್ನಾಗಿಯೇ ಆಗಿದೆ. ಆ ಅನುಭವಗಳೇ ಜೀವನದ ಅನಾರೋಗ್ಯದ ಮಜಲಿನ ಅನಾವರಣ ಮತ್ತು ಅನುಭವ ಕಥನವಾಗಬಲ್ಲುದು. ಈಗೀಗ ನಮ್ಮಲ್ಲಿ ಆರೋಗ್ಯ ಮತ್ತು ವಾಣಿಜ್ಯದ ನಡುವೆ ಏರ್ಪಟ್ಟಿರುವ ಸಂಕೀರ್ಣ ಸಂಬಂಧವನ್ನೂ ಪ್ರದರ್ಶಿಸಬಲ್ಲುದು.

ಬಿಡಿ, ಆದರೆ ವಿಷಯ ಅದು ಮಾತ್ರ ಅಲ್ಲ.

ಇದಕ್ಕೆಲ್ಲ ಒಂದು ಪ್ರೊಸೀಜರ್ ಇದೆ, ಅದು ನಮಗೀಗ ಎರಡು‌ ಮೂರು ಸಲದಿಂದ ಕಂಠಪಾಠವಾಗಿದೆ... ಈ ಸಲವೂ ಬಿ ಜಿ ಎಸ್ ಗ್ಲೆನೀಗಲ್ಸ್ ಆಸ್ಪತ್ರೆಗೆ ಸೇರಿಸಿದ್ದೆವು, ಇದು ಉತ್ತರಹಳ್ಳಿಗೆ ಹೋಗುವ ಕೆಂಗೇರಿ ಭಾಗದಲ್ಲಿದೆ.

ಮೊದಲು ತುರ್ತು ಚಿಕಿತ್ಸೆಗಾಗಿ ಎಮರ್ಜೆನ್ಸಿಗೆ ಸೇರಿಸಿಕೊಳ್ಳಬೇಕು.

ಅಲ್ಲಿಂದ ಸಾಧಾರಣವಾಗಿ ಐಸಿಯುಗೆ ಕರೆದೊಯ್ಯತ್ತಾರೆ. ಅಲ್ಲಿ ಅಬ್ಸರ್ವ್ ಮಾಡುವುದಾಗಿ ಎರಡು ದಿನ‌ ಕನಿಷ್ಠ ಇಟ್ಟುಕೊಳ್ಳುತ್ತಾರೆ ...ಅಲ್ಲಿನ ಔಷಧೋಪಚಾರ ವಾರ್ಡಿಗಿಂತಾ ದುಬಾರಿ ಬೆಲೆ... ಅಲ್ಲಿ ದಿನಕ್ಕೆ ಎರಡು ಸಲ ಒಬ್ಬೊಬ್ಬರೇ ಹೋಗಿ ಬರಬಹುದು. ರಾತ್ರಿ ಯಾರೂ ಸಹಾಯಕರು ಮಲಗುವಂತಿಲ್ಲ... ರೋಗಿ‌ ಒಬ್ಬರೇ.

(ಅಲ್ಲಿ ಹೊರಗೆ ಜನ ಜಮಾಯಿಸಬಾರದೆಂದು ಸೀಟ್ಸ್ ಸಹಾ ಹೊರಗೆ ಇಟ್ಟಿರಲ್ಲ..)

ವೈದ್ಯರು ಅಭಿಪ್ರಾಯ ಪಟ್ಟರೆ ಅಲ್ಲಿಂದ ವಾರ್ಡಿಗೆ ಶಿಫ್ಟ್ ಮಾಡುತ್ತಾರೆ...

ಆಗ ನಮಗೆ ಇನ್ಶೂರೆನ್ಸ್ ಇದ್ದರೆ ನೆರವಿಗೆ ಬರುತ್ತದೆ. ಆದರೆ ತುಂಬಾ ವಯಸ್ಸಾದವರಿಗೆ, ಆಗಲೇ ರೋಗ ಪೀಡಿತರಾಗಿದ್ದರೆ ಅಥವಾ ಒಮ್ಮೆ ಆಗಲೇ ಇನ್ಶುರೆನ್ಸ್ ಬಳಸಿಬಿಟ್ಟಿದ್ದರೆ ಅದರ ಕವರ್ ಮೊತ್ತ ಕಡಿಮೆಯಾಗುತ್ತದೆ. ನಮ್ಮ ವಿಮೆಗೆ ಯಾವ ತರಹದ ಬೆಲೆಯ ವಾರ್ಡ್ ಎಂಬುದು ಗೊತ್ತಾದ ಮೇಲೆ ಅಲ್ಲಿಗೆ ವರ್ಗಾಯಿಸುತ್ತಾರೆ, ಜನರಲ್, ಸೆಮಿ ಪ್ರೈವೇಟ್, ಪ್ರೈವೇಟ್ ಈ ಬಗೆಯದು. ಅಲ್ಲಿ ಒಂದರೆಡು ದಿನ‌ ಕನಿಷ್ಠ ಇರಲೇಬೇಕು.

ಅಲ್ಲಿ ಒಬ್ಬ ಸಹಾಯಕರು‌ ಮಲಗಬಹುದು. ಊಟ ತಿಂಡಿ ನಾವು ಹೋದ ಆಸ್ಪತ್ರೆಯಲ್ಲಿ ಚೆನ್ನಾಗಿಯೇ ಇದೆ. ಸ್ವಚ್ಛವಾಗಿ ಸಹ ಇದೆ.

ಸಮಯಕ್ಕೆ ಸರಿಯಾಗಿ ಕೊಡುತ್ತಾರೆ. ಬಂದವರಿಗೆ ಕೂರಲು ವಿಶಾಲ ಲಾಬಿ, ಹವಾನಿಯಂತ್ರಣ ವ್ಯವಸ್ಥೆ ಪೂರ್ತಿ ಇದೆ. ಕಾಫಿ ಡೇ ಕೆಫ಼ೆಟೇರಿಯ , ಸುಸಜ್ಜಿತ ಕ್ಯಾಂಟೀನ್ ಎಲ್ಲ ವ್ಯವಸ್ಥೆ ಇದೆ. ದೊಡ್ಡ ಪಾರ್ಕಿಂಗ್ ಸಹ ಇದೆ.

ಇನ್ನು ರೋಗಿಗೆ ರಕ್ತ ಪರೀಕ್ಷೆ, ಕ್ಷಕಿರಣ, ಎಂ ಆರ್ ಐ ಸ್ಕ್ಯಾನಿಂಗ್ ಎಲ್ಲ ನಡೆಯುತ್ತದೆ. ಅದೆಲ್ಲ ಖರ್ಚು ಉಂಟು.

ಎಲ್ಲಾ ‌ಮುಗಿದ ಮೇಲೆ ಬಿಡುಗಡೆ ‌ಅದಕ್ಕೆ ಮತ್ತೆ ಇನ್ಶುರೆನ್ಸ್ ಕಂಪನಿಯ ಅಪ್ರೂವಲ್ ಬರಲು ಸ್ವಲ್ಪ ಕ್ಲರ್ಕ್ ಬಳಿ ಸುತ್ತಾಟ, ಅರ್ಧ ದಿನ‌ ಕಾಯುವುದು ಎಲ್ಲಾ ಇದೆ. ಅದು ಬೆಳಿಗ್ಗೆಯಿಂದ ಸಂಜೆಯ ವರೆಗೆ ಕಾದರೆ ಭಾಗಶಃ ಅಂದರೆ ಅರ್ಧ ಮುಕ್ಕಾಲು‌ ಮೊತ್ತ ಬರಬಹುದು.‌ ಮಿಕ್ಕ ಹಣ ನಾವು ಪಾವತಿ ಮಾಡಿ ರೋಗಿಯನ್ನು ಮನೆಗೆ ಕರೆದುಕೊಂಡು ಬರುವುದು.

ಇಷ್ಟೆಲ್ಲ ಯಾಕೆ ಹೇಳಿದೆನೋ ಗೊತ್ತಿಲ್ಲ. ನಿಮಗೂ ಇಂತಹ ಅನುಭವ ಈಗಾಗಲೇ ಇರಬಹುದು...

ಆದರೆ ಅರಿವಿಗಾಗಿ ಮಾತ್ರ.

ಆರೋಗ್ಯವೇ ಭಾಗ್ಯ ಎನ್ನುವ‌ ಮಾತು ಸುಳ್ಳಲ್ಲ, ಅನಾರೋಗ್ಯವಂತೂ ಮನೆಯವರ ಪಾಲಿನ ಮುಗಿಯದ ಕರ್ತವ್ಯ, ಮತ್ತು ರೋಗಿಗೆ ಚಿಕ್ಕ ನರಕ ಶಿಕ್ಷೆಯೇ.


78 views0 comments

Kommentare


© 2020 by Nagesh Kumar CS . Proudly created with Wix.com

bottom of page